ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ವ್ಯಾಪಿಸುವ ಮೂಲಕ ಮಾರಣಾಂತಿಕವಾಗಿ ಪರಿಣಮಿಸಿದೆ.
ಇದರ ನಿಯಂತ್ರಣಕ್ಕಾಗಿ ವಿಶ್ವದ ಹಲವು ರಾಷ್ಟ್ರಗಳ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾರತದಲ್ಲೂ ಲಾಕ್ ಡೌನ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ಸಾಮಾಜಿಕ ಚಟುವಟಿಕೆಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಜಿಲ್ಲೆಯಿಂದ ಜಿಲ್ಲೆಗೆ ಅಥವಾ ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ವೇಳೆ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಹೀಗೆ ಅನುಮತಿ ಪಡೆಯದೆ ಆಂಧ್ರಪ್ರದೇಶದ ವಧುವನ್ನು ಮದುವೆಯಾಗಿದ್ದ ವರನೊಬ್ಬ ಈಗ ಫಜೀತಿಗೆ ಸಿಲುಕಿದ್ದಾನೆ.
ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಮದ ಈ ವರ ಗುರುವಾರದಂದು ತನ್ನ ಗ್ರಾಮದಲ್ಲೇ ಆಂಧ್ರಪ್ರದೇಶದ ವಧುವಿನ ಜೊತೆ ಮದುವೆಯಾಗಿದ್ದಾನೆ. ಈ ಮದುವೆಗೆ ಆಂಧ್ರಪ್ರದೇಶದಿಂದ 12 ಮಂದಿ ಬಂದಿದ್ದು, ಇವರುಗಳು ಪಾಸ್ ಪಡೆದಿರಲಿಲ್ಲವೆನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ವಧು – ವರ ಸೇರಿ ಹಲವರನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ.