ಮಂಗಳೂರಿನ ಬೋಳಾರಿನಲ್ಲಿ ನೆಲೆಸಿರುವ ಮಂಗಳಾದೇವಿ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ನೆಲೆಸಿದ್ದಾಳೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ.
ಈ ದೇವಸ್ಥಾನ ಒಂಬತ್ತನೇ ಶತಮಾನದ ರಾಜನಾದ ಕುಂದವರ್ಮನ ಕಾಲದಲ್ಲಿ ಪ್ರತಿಷ್ಠಾಪನೆ ಗೊಂಡಿತು.
ಇಲ್ಲಿಗೆ ಬಂದ ಎಲ್ಲಾ ಭಕ್ತಾದಿಗಳನ್ನು ತಾಯಿ ಮಂಗಳಾಂಬೆ ಬರಿ ಕೈಯಲ್ಲಿ ಹಿಂದೆ ಕಳುಹಿಸುವುದಿಲ್ಲ. ಸುಹಾಸಿನಿಯರು ತಮ್ಮ ವಿವಾಹಾಪೇಕ್ಷೆಯನ್ನು ಸ್ವಯಂವರ ಪಾರ್ವತಿ ವೃತದ ಮುಖಾಂತರ ಹೇಳಿಕೊಂಡರೆ ಆ ತಾಯಿ ಒಳ್ಳೆಯ ಗಂಡನನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ.
ಮಂಗಳೂರಿನ ಮಂಗಳಾದೇವಿ ಹಾಗೂ ಕದ್ರಿ ದೇವಸ್ಥಾನಕ್ಕೆ ಸಂಬಂಧವಿದೆ. ಕದ್ರಿ ದೇವಸ್ಥಾನದ ಜೋಗಿ ಪಂಥದವರು ಅಲ್ಲಿ ಉತ್ಸವ ಪ್ರಾರಂಭಿಸುವ ಮುನ್ನ ಮಂಗಳಾದೇವಿಗೆ ಹೂವು, ರೇಷ್ಮೆ ವಸ್ತ್ರವನ್ನು ಕೊಡುತ್ತಾರೆ. ಇಂದಿಗೂ ಸಾವಿರಾರು ಭಕ್ತಾದಿಗಳು ಮಂಗಳಾದೇವಿಯ ಆಶೀರ್ವಾದ ಪಡೆಯಲು ನಿತ್ಯ ಆಗಮಿಸುತ್ತಾರೆ.