ಕಳೆದೆರಡು ತಿಂಗಳಿನಿಂದ ತಣ್ಣಗಿದ್ದ ರಾಜ್ಯ ರಾಜಕಾರಣ ಈಗ ಇದ್ದಕ್ಕಿದ್ದಂತೆ ಕಾವು ಪಡೆದುಕೊಂಡಿದೆ. 20ಕ್ಕೂ ಅಧಿಕ ಶಾಸಕರುಗಳು ಪ್ರತ್ಯೇಕ ಸಭೆ ನಡೆಸಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಅಲ್ಲದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರ ನೇರವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ನಾಯಕತ್ವ ಬದಲಾದರೆ ಅದಕ್ಕೆ ನಮ್ಮ ಸಹಮತವಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರ ನಾಯಕತ್ವಕ್ಕೆ ಪರೋಕ್ಷವಾಗಿ ಸೆಡ್ಡು ಹೊಡೆದಿದ್ದಾರೆ.
ದಿಢೀರ್ ನಡೆದ ಈ ರಾಜಕೀಯ ಬೆಳವಣಿಗೆಗೆ ಯಡಿಯೂರಪ್ಪನವರು ಕೈಗೊಂಡ ಒಂದು ನಿರ್ಧಾರವೇ ಕಾರಣವೆಂದು ಹೇಳಲಾಗಿದೆ. ತಮ್ಮ ಆಪ್ತ ಸಹಾಯಕನಾಗಿದ್ದ ಸಂತೋಷ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಮುಖ್ಯಮಂತ್ರಿ ಸಲಹೆಗಾರ ಹುದ್ದೆ ನೀಡಲು ಯಡಿಯೂರಪ್ಪನವರು ಮುಂದಾಗಿದ್ದು, ಇದು ಕೆಲವರ ಕಣ್ಣು ಕೆಂಪಗಾಗಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಮಗೆ ಬೇಕಾದವರಿಗೆಲ್ಲಾ ಯಡಿಯೂರಪ್ಪನವರು ಸ್ಥಾನಮಾನ ಕಲ್ಪಿಸಿಕೊಡುತ್ತಿದ್ದು, ಆದರೆ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವನೆ ಕೆಲ ಶಾಸಕರುಗಳಲ್ಲಿ ಮೂಡಿದ್ದು, ಹೀಗಾಗಿಯೇ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತ್ಯೇಕ ಸಭೆ ನಡೆಸುವ ಮೂಲಕ ಸೆಡ್ಡು ಹೊಡೆದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.