ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಾರ್ವಜನಿಕವಾಗಿಯೇ ಶರಂಪರ ಕಿತ್ತಾಡಿಕೊಂಡಿದ್ದರು. ಮಾಡಾಳು ವಿರೂಪಾಕ್ಷಪ್ಪ ಉಚಿತ ನೀರು ಸರಬರಾಜು ಮಾಡಲು ಮನವಿ ಮಾಡಿದ ವೇಳೆ ಹಣ ನಿಮ್ಮಪ್ಪ ಕೊಡುತ್ತಾರಾ ಎಂದು ಸಂಸದ ಸಿದ್ದೇಶ್ವರ್ ಹೇಳಿದ್ದು ಕಿತ್ತಾಟಕ್ಕೆ ಕಾರಣವಾಗಿತ್ತು.
ಗಮನಾರ್ಹ ಸಂಗತಿ ಎಂದರೆ ಇಬ್ಬರೂ ಆಡಳಿತ ಪಕ್ಷ ಬಿಜೆಪಿಗೆ ಸೇರಿದವರಾಗಿದ್ದಾರೆ. ಇದೀಗ ಬಿಜೆಪಿಯ ಇಬ್ಬರು ಸಚಿವರು ಸಚಿವ ಸಚಿವ ಸಂಪುಟ ಸಭೆಯಲ್ಲೇ ಮಾತಿನ ಚಕಮಕಿ ನಡೆಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಸಚಿವರುಗಳಾದ ಸೋಮಣ್ಣ ಹಾಗೂ ಮಾಧುಸ್ವಾಮಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಶುಕ್ರವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡಿಎ ಕಾಯ್ದೆ ಕುರಿತು ಸಚಿವ ಮಾಧುಸ್ವಾಮಿ ವಿವರ ನೀಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸೋಮಣ್ಣ, ತಮಗೆ ಈ ಕುರಿತು ಹೆಚ್ಚಿನ ಮಾಹಿತಿ ಇದೆ. ಹೀಗಾಗಿ ಮಾತನಾಡಬೇಕಿದೆ ಎಂದಾಗ ಮಾಧುಸ್ವಾಮಿ, ಬೆಂಗಳೂರು ನಿಮ್ಮ ಅಪ್ಪನದಾ ಎಂದು ಕೇಳಿದರೆನ್ನಲಾಗಿದೆ. ಇದಕ್ಕೆ ಆಕ್ರೋಶಗೊಂಡ ಸೋಮಣ್ಣ ನಿಮ್ಮಪ್ಪನದಾ ಎಂದು ಮರು ಪ್ರಶ್ನಿಸಿದರೆಂದು ಹೇಳಲಾಗಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ಯಡಿಯೂರಪ್ಪನವರು ಇಬ್ಬರನ್ನೂ ಸಮಾಧಾನಪಡಿಸಿದರೆನ್ನಲಾಗಿದೆ.