ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಈಗಾಗಲೇ 30ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 800ಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದು, ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಸಾಧನಗಳನ್ನು ಕೊಂಡುಕೊಳ್ಳಲು ಸಾರ್ವಜನಿಕರು ಮುಂದಾಗುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಬಂದ ಜಾಹೀರಾತು ನೋಡಿ ಮರುಳಾದವರೊಬ್ಬರು ಹಣ ಕಳೆದುಕೊಂಡಿದ್ದಾರೆ.
ಮಾಸ್ಕ್, ಐಆರ್ ಥರ್ಮೋಮೀಟರ್, ಪಿಪಿಇ ಕಿಟ್, ಗ್ಲೌಸ್, ಸ್ಯಾನಿಟೈಸರ್ ಮಾರಾಟ ಮಾಡುವುದಾಗಿ ಫೇಸ್ ಬುಕ್ ನಲ್ಲಿ ಜಾಹೀರಾತು ಹಾಕಲಾಗಿದ್ದು, ಇದನ್ನು ನೋಡಿದ ಕಿರಣ್ ಎಂಬವರು ಆನ್ಲೈನ್ ಮೂಲಕ 30 ಸಾವಿರ ರೂಪಾಯಿ ಪಾವತಿಸಿದ್ದಾರೆ. ಆ ಬಳಿಕ ತಾವು ವಂಚನೆಗೊಳಗಾಗಿರುವುದರ ಅರಿವು ಅವರಿಗಾಗಿದ್ದು, ಈಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.