ಶಿವಮೊಗ್ಗ: ಕೋವಿಡ್-19 ಹಿನ್ನಲೆಯಲ್ಲಿ ದ್ವಿತೀಯ ಪಿಯು ಮೌಲ್ಯಮಾಪನ ಕೇಂದ್ರಗಳನ್ನು ಪ್ರತಿ ಜಿಲ್ಲೆಗಳಿಗೂ ವಿಸ್ತರಣೆ ಮಾಡುವಂತೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಉಪನ್ಯಾಸಕರು ಕೋವಿಡ್-19 ಹಿನ್ನೆಲೆಯಲ್ಲಿ ದ್ವಿತೀಯ ಪಿಯು ಮೌಲ್ಯ ಮಾಪನ ಕೇಂದ್ರಗಳನ್ನು ಪ್ರತಿ ಜಿಲ್ಲೆಗಳಲ್ಲೂ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಆಗ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರ ಈಗ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಮೌಲ್ಯಮಾಪನಾ ಪ್ರಕ್ರಿಯೆಯನ್ನು ವಿಕೇಂದ್ರಿಕರಣಗೊಳಿಸದೇ ಮೌಲ್ಯಮಾಪನ ನಡೆಸುವಂತೆ ಆದೇಶಿಸಿದೆ ಎಂದು ದೂರಿದರು.
ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು ಕೇಂದ್ರಗಳಲ್ಲಿ ಅತಿ ಹೆಚ್ಚು ಮೌಲ್ಯಮಾಪನ ಕೇಂದ್ರಗಳಿದ್ದು, ಅಲ್ಲಿ ಮೌಲ್ಯಮಾಪನ ಹೋಗುವ ಉಪನ್ಯಾಸಕರಿಗೆ ವಸತಿ, ಊಟದ ಸಮಸ್ಯೆ ಲಭ್ಯವಿಲ್ಲ. ಅಲ್ಲದೇ ಮೌಲ್ಯಮಾಪನಕ್ಕೆ ದೂರದ ಜಿಲ್ಲೆಗಳಿಂದ ತೆರಳುವ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಇಲಾಖೆ ಆದೇಶ ಹೊರಡಿಸಿದೆ.
ಇದರಿಂದಾಗಿ ಮೌಲ್ಯಮಾಪನ ಕಾರ್ಯ ವಿಳಂಬವಾಗಲಿದೆ. ಸರ್ಕಾರ ಸದ್ಯಕ್ಕೆ ಮೌಲ್ಯಮಾಪನ ಕಾರ್ಯಗಳನ್ನೆ ವಿಕೇಂದ್ರಿಕರಣ ಮಾಡಿ ಮೌಲ್ಯಮಾಪನ ನಡೆಸಿದರೆ ಕೆಲಸವೂ ಬೇಗ ಆಗುವುದಲ್ಲದೇ ಎಲ್ಲರೂ ಒಂದೆಡೆ ಗುಂಪು ಸೇರಿ ಕೊರೋನಾ ಹರಡುವ ಅಪಾಯ ತಪ್ಪುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ವಿಷಯಗಳ ಮೌಲ್ಯಮಾಪನ ಕೇಂದ್ರಗಳಿಗೆ ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಬರುವ ಮೌಲ್ಯಮಾಪಕರಿಗೆ ವಿನಾಯಿತಿ ದೊರೆತಲ್ಲಿ ಮೌಲ್ಯಮಾಪನ ಕಾರ್ಯ ತಿಂಗಳಿಗೂ ಮಿಗಿಲಾಗಿ ನಡೆಯುವ ಸಾಧ್ಯತೆ ಇದೆ. ಹೀಗೆ ನಿರಂತರ ಮೌಲ್ಯಮಾಪನ ಕಾರ್ಯ ನಡೆಯವುದು ಸೂಕ್ತವಲ್ಲ. ಮೌಲ್ಯಮಾಪನದ ಜೊತೆಗೆ ಗಣಕೀಕರಣ ಕಾರ್ಯವನ್ನೂ ಮಾಡಬೇಕಿರುವುದರಿಂದ ಮೌಲ್ಯಮಾಪನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಉಪನ್ಯಾಸಕರ ಆರೋಗ್ಯ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪಿಯುಸಿ ಮೌಲ್ಯಮಾಪನವನ್ನು ಆಯಾ ಜಿಲ್ಲಾ ಮಟ್ಟದಲ್ಲಿ ನಡೆಸುವಂತೆ ಹಾಗೂ ಮೌಲ್ಯಮಾಪಕರಿಗೆ ಅದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯೋಗೀಶ್ ಎಸ್, ಕಾರ್ಯಾಧ್ಯಕ್ಷ ಡಾ.ಕಲೀಮುಲ್ಲಾ, ಪ್ರಮುಖರಾದ ರಾಜಶೇಖರ್, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.