ಚೀನಾದ ವುಹಾನ್ ನಗರದಲ್ಲಿ ಆರಂಭಗೊಂಡ ಕರೋನಾ ವೈರಸ್ ಈಗ ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿಗೆ ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಕರೋನಾ ಭಾರತದಲ್ಲೂ ವಕ್ಕರಿಸಿಕೊಂಡಿದ್ದು, ಈವರೆಗೆ ಇದಕ್ಕೆ 683 ಮಂದಿ ಬಲಿಯಾಗಿದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಿದ್ದು, ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕರ್ನಾಟಕದಲ್ಲೂ ಕರೋನಾ ಕಾಣಿಸಿಕೊಂಡಿರುವ ಕಾರಣ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಇದೀಗ ಲಾಕ್ಡೌನ್ ಅವಧಿ ಮೇ 3ರಂದು ಪೂರ್ಣಗೊಳ್ಳುತ್ತಿರುವ ಕಾರಣ ಲಾಕ್ಡೌನ್ ತೆರವುಗೊಂಡ ಬಳಿಕ ಪರೀಕ್ಷಾ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಇದರ ಮಧ್ಯೆ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ದೂರದರ್ಶನದ ಚಂದನ ವಾಹಿನಿಯಲ್ಲಿ ಏಪ್ರಿಲ್ 21ರಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ಆರಂಭಿಸಲಾಗುತ್ತಿದ್ದು, ಪ್ರತಿದಿನ ಮಧ್ಯಾಹ್ನ 3 ರಿಂದ 4-30 ರ ವರೆಗೆ ಇದು ಪ್ರಸಾರಗೊಳ್ಳಲಿದೆ. ಮೊದಲ 16 ದಿನ ಗಣಿತ ಹಾಗೂ ವಿಜ್ಞಾನ, 17 ನೇ ದಿನ ಈ ಎರಡು ವಿಷಯಗಳ ಮಾದರಿ ಪ್ರಶ್ನೆ ಪ್ರಸಾರವಾಗುವುದು.
18ನೇ ದಿನದಿಂದ 6 ದಿನ ಸಮಾಜ ವಿಜ್ಞಾನ, ನಂತರ ಕನ್ನಡ ಮತ್ತು ಇಂಗ್ಲಿಷ್ ಭಾಷಾ ವಿಷಯಗಳ ಬೋಧನೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.