ದೇಶದೆಲ್ಲೆಡೆ ಕೊರೋನಾ ವೈರಸ್ನಿಂದಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತಕ್ಕೆ ಅಂಫಾನ್ ಎಂದು ಹೆಸರಿಡಲಾಗಿದೆ.
ಈ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.
ಆದರೆ ಇದೀಗ ಈ ಚಂಡಮಾರುತ ತೀವ್ರದಿಂದ ಅತಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಅಂಫಾನ್ ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಹೆಚ್ಚು ಆಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಒಡಿಶಾದ 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಚಂಡಮಾರುತ ಉತ್ತರ ಒಳನಾಡಿಗೆ ಚಲನೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಸಮುದ್ರ ತೀರದಿಂದ ಭೂಪ್ರದೇಶ ಪ್ರವೇಶಿಸಬಹುದು ಎನ್ನಲಾಗಿದೆ. ಅದರಲ್ಲೂ ಬಾಂಗ್ಲಾದೇಶದ ಭಾಗದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಗಾಳಿಯ ತೀವ್ರತೆ ಹೆಚ್ಚಾಗಲಿದ್ದು, ಗಂಟೆಗೆ 95 ರಿಂದ 105 ಕಿಲೋಮೀಟರ್ ವೇಗದಲ್ಲಿ ಗಾಳಿ ಚಲಿಸಲಿದೆ.
ಚಂಡಮಾರುತದ ತೀವ್ರತೆ ಅರಿತ ಎನ್ಡಿಆರ್ಎಫ್ ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾ ಹಾಗೂ ಬಂಗಾಳಕ್ಕೆ ತನ್ನ ತಂಡಗಳನ್ನು ಕಳುಹಿಸಿದೆಯಂತೆ. ಆದರೆ ಈ ಚಂಡಮಾರುತದಿಂದ ಕರ್ನಾಟಕಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.