ಹೆಚ್.ಡಿ. ರೇವಣ್ಣ ಒಂದಿಲ್ಲೊಂದು ವಿಚಾರವಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ರೇವಣ್ಣ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ರೇವಣ್ಣ ಸ್ಪಷ್ಟನೆ ನೀಡುವುದರ ಜೊತೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಗೆ ಸವಾಲು ಹಾಕಿದ್ದಾರೆ.
ಹೌದು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿರುಕುಳ ನೀಡುತ್ತಿದ್ದಾರೆಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪ ಮಾಡಿದ್ದರು. ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರು ಭ್ರಷ್ಟಾಚಾರ ಮಾಡಿದ್ದಾರೆ ಎಂದಿದ್ದರು. ಈ ವಿಚಾರವಾಗಿ ಹಾಸನದಲ್ಲಿ ರೇವಣ್ಣ ಮಾತನಾಡಿದ್ದಾರೆ.
ಎಂಎಲ್ಸಿ ಗೋಪಾಲಸ್ವಾಮಿ ಹಾಗೂ ಶ್ವೇತಾ ದೇವರಾಜ್ ಮಾಡುತ್ತಿರುವುದು ಸುಳ್ಳು ಆರೋಪ. ನಮ್ಮ ಜೆಡಿಎಸ್ನ ಜಿಲ್ಲಾ ಪಂಚಾಯ್ತಿ ಸದಸ್ಯರು ಭ್ರಷ್ಟಾಚಾರ ಮಾಡಿದ್ರೆ ಸಾಬೀತುಪಡಿಸಲಿ. ಭ್ರಷ್ಟಾಚಾರ ಆರೋಪ ನಿಜವಾದರೆ ನಮ್ಮ ಸದಸ್ಯರಿಂದ ರಾಜೀನಾಮೆ ಕೊಡಿಸುತ್ತೇನೆ. ಅವರು ಕ್ಷಮೆ ಕೇಳಬೇಕು. ಈ ವಿಚಾರವಾಗಿ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ.