ಕೊರೊನಾದಿಂದಾಗಿ ದೇಶವೇ ಲಾಕ್ಡೌನ್ ಆಗಿದೆ. ಹೀಗಿರುವಾಗ ಅನೇಕ ಮಂದಿ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲಿಯೇ ಉಳಿದಿದ್ದಾರೆ. ಇತ್ತ ಕೂಲಿ ಕಾರ್ಮಿಕರು ಕೂಡ ಕೆಲಸ ಇಲ್ಲದೆ ಕೂರುವಂತಾಗಿದೆ. ಇಂತಹ ಸಮಯದಲ್ಲಿ ಕೆಲಸದ ಅನಿವಾರ್ಯತೆ ತುಂಬಾ ಇದೆ. ಇವಾಗೇನೋ ಲಾಕ್ಡೌನ್ ಇದೆ. ಆದರೆ ಇದು ಮುಗಿದ ನಂತರ ಕೆಲಸದ ಗತಿಯೇನು ಎಂಬುದು ಎಲ್ಲರ ಪ್ರಶ್ನೆ.
ಇದೀಗ ಕೆ.ಎಸ್.ಈಶ್ವರಪ್ಪ ನಿರುದ್ಯೋಗಿಗಳಿಗೆ ಭರವಸೆಯೊಂದನ್ನು ನೀಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಶಿವಮೊಗ್ಗ ಸಮೀಪದ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆ ಕಾಮಗಾರಿ ಪರಿಶೀಲನೆ ನಂತರ ಈಶ್ವರಪ್ಪ ಮಾತನಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸಾಕಷ್ಟು ಮಂದಿಗೆ ಜೀವನ ಮಾಡುವುದು ಕಷ್ಟವಾಗಿದೆ. ಅವರಿಗೆ ಕೆಲಸ ನೀಡಿ ನೆಮ್ಮದಿಯ ಬದುಕಿಗೆ ಆಸರೆಯಾಗಬೇಕಿದೆ. ಗ್ರಾಮೀಣಾಭಿವೃದ್ಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಕೆಲಸ ಸಿಗುತ್ತದೆ ಎಂದರು. ಇದೇ ವೇಳೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದ್ಯೋಗ ಖಾತ್ರಿ ಶ್ರಮಿಕರು ಮೂರು ಲಕ್ಷದ ಚೆಕ್ ಅನ್ನು ಸಚಿವರಿಗೆ ನೀಡಿದರು.