ಲಾಕ್ ಡೌನ್ ಕಾರಣಕ್ಕಾಗಿ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನ ಹಾರಾಟ ಈಗ ಆರಂಭವಾಗಿದೆ. ಹೀಗಾಗಿ ಹೊರರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರು ಈಗ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಈ ರೀತಿ ಆಗಮಿಸುವವರು ನಿಯಮಾವಳಿಗಳ ಪ್ರಕಾರ ಒಂದು ವಾರ ಕಾಲ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಬೇಕಿತ್ತು. ಆ ಬಳಿಕ ಮತ್ತೊಂದು ವಾರದ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.
ಆದರೆ ಸೋಮವಾರದಂದು ನವದೆಹಲಿಯಿಂದ ಆಗಮಿಸಿದ ಕೇಂದ್ರ ಸಚಿವ ಸದಾನಂದಗೌಡ ಈ ನಿಯಮಗಳನ್ನು ಪಾಲಿಸದೆ ನೇರವಾಗಿ ಕಛೇರಿಗೆ ತೆರಳಿದ್ದರು. ಇದು ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.
ಆ ಬಳಿಕ ಆರೋಗ್ಯ ಇಲಾಖೆ ಕ್ವಾರಂಟೈನ್ ನಿಯಮಾವಳಿಗಳ ಕುರಿತು ಪರಿಷ್ಕೃತ ಆದೇಶ ಹೊರಡಿಸಿದ್ದು, ಅಧಿಕೃತ ಕಚೇರಿ ಕರ್ತವ್ಯದ ಮೇಲೆ ವಿವಿಧ ರಾಜ್ಯಗಳ ನಡುವೆ ಸಂಚರಿಸುವ ಕೇಂದ್ರ ಮತ್ತು ರಾಜ್ಯ ಸಚಿವರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.