ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈಗ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 31ರವರೆಗೆ ಇದು ಮುಂದುವರಿಯಲಿದ್ದು, ಈ ಲಾಕ್ ಡೌನ್ ವೇಳೆ ಆರ್ಥಿಕ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಬಹಳಷ್ಟು ವಿನಾಯಿತಿಗಳನ್ನು ನೀಡಲಾಗಿದೆ.
ಹೀಗಾಗಿ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರದ ಜೊತೆಗೆ ಆಟೋ, ಟ್ಯಾಕ್ಸಿಗಳ ಓಡಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ಕೊರೊನಾ ಸಾರ್ವಜನಿಕರನ್ನು ಎಷ್ಟರಮಟ್ಟಿಗೆ ಕಂಗೆಡಿಸಿದೆ ಎಂದರೆ ಸಾರ್ವಜನಿಕ ಸಾರಿಗೆ ಏರಲೂ ಸಹ ಭಯ ಪಡುತ್ತಿದ್ದಾರೆ. ಪ್ರಯಾಣದ ವೇಳೆ ಎಲ್ಲಿ ತಮಗೆ ಸೋಂಕು ತಗಲುತ್ತದೋ ಎಂಬ ಆತಂಕವೇ ಇದಕ್ಕೆ ಕಾರಣ.
ಬಹುತೇಕರು ಪ್ರಯಾಣಕ್ಕಾಗಿ ಸ್ವಂತ ವಾಹನಗಳನ್ನು ಬಳಸುತ್ತಿದ್ದು, ಇದರಿಂದ ಬಸ್ ಗಳು ಖಾಲಿ ಹೊಡೆಯುವಂತಾಗಿದೆ. ಆಟೋ, ಟ್ಯಾಕ್ಸಿಗಳ ಮಾಲೀಕರು ಸಹ ಪ್ರಯಾಣಿಕರು ಬಾರದೆ ನಷ್ಟ ಅನುಭವಿಸುವಂತಾಗಿದೆ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಆದರೆ ಕೆಲವು ಮಾರ್ಗಗಳಲ್ಲಿ ಇಷ್ಟು ಸಂಖ್ಯೆಯ ಪ್ರಯಾಣಿಕರು ಸಹ ಬರುತ್ತಿಲ್ಲ.