ಕರೋನಾ ಸಂಕಷ್ಟದಿಂದ ಹೊರ ಬರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೇ 18 ರಿಂದ ಮೇ 31ರ ತನಕ ಲಾಕ್ಡೌನ್ 4.0 ಜಾರಿ ಮಾಡಿದೆ. ಆದರೆ ಅನೇಕ ವಿನಾಯ್ತಿಗಳನ್ನು ನೀಡಿದ್ದು, ಬಸ್ ಸಂಚಾರದ ಕುರಿತು ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿತ್ತು.
ಹೀಗಾಗಿ ಬೆಳಗ್ಗೆಯಿಂದಲೇ ಬೆಂಗಳೂರು ನಗರದಲ್ಲಿ ಬಸ್ ಸಂಚಾರ ಆರಂಭವಾಯ್ತು. ಕೆಎಸ್ಆರ್ಟಿಸಿಯೂ ಇದ್ದಿದ್ದರಿಂದ ಬೆಳಗ್ಗೆಯೇ ಅನೇಕ ಮಂದಿ ತಮ್ಮ ಜಿಲ್ಲೆಗಳಿಗೆ ಹೋಗಲು ಮೆಜೆಸ್ಟಿಕ್ ಬಳಿ ಜಮಾಯಿಸಿದ್ದರು. ಇತ್ತ ಬಿಎಂಟಿಸಿ ಬಸ್ ಬಿಟ್ಟರೂ ಪ್ರಯಾಣಿಕರು ಮಾತ್ರ ಬಿಎಂಟಿಸಿ ಬಸ್ಗೆ ಬರುವ ದೃಶ್ಯಗಳು ಕಡಿಮೆ ಇತ್ತು.
ಹೌದು, ಜನರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿ ಅನುವು ಮಾಡಿಕೊಟ್ಟಿದೆ ಸರ್ಕಾರ. ಅದಕ್ಕೂ ಷರತ್ತುಗಳನ್ನು ಹಾಕಿದೆ. ಒಂದು ಬಸ್ನಲ್ಲಿ 30 ಜನ ಮಾತ್ರ ಇರಬೇಕು ಎಂದು ತಿಳಿಸಿದೆ.
ಸರ್ಕಾರದ ಸೂಚನೆ ಮೇರೆಗೆ ಷರತ್ತು ಬದ್ದವಾಗಿ ಇಂದು ಬಸ್ಗಳು ರಸ್ತೆಗಿಳಿದಿವೆ. ಆದರೆ ಬಿಎಂಟಿಸಿ ಬಸ್ನಲ್ಲಿ ಜನ ಮಾತ್ರ ಇಲ್ಲ. ಕೊರೊನಾ ಭಯದಿಂದಾಗಿ ಜನ ಬಿಎಂಟಿಸಿ ಬಸ್ ಹತ್ತಲು ಭಯ ಪಡುತ್ತಿದ್ದಾರೆ. ಹೀಗಾಗಿ ಒಂದೊಂದು ಬಸ್ನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು.
ಇನ್ನು ಬಹುತೇಕ ಮಂದಿ ತಮ್ಮ ಕಚೇರಿಗಳಿಗೆ ತೆರಳಲು ಸ್ವಂತ ವಾಹನಗಳನ್ನು ಬಳಸಿದ್ದಾರೆ. ಬಹುತೇಕ ಮಂದಿ ಸ್ವಂತ ವಾಹನಗಳಲ್ಲಿ ಕಚೇರಿಗೆ ಹೋಗುತ್ತಿದ್ದಾರೆ. ಹೀಗಾಗಿ ಬಹು ದಿನಗಳ ನಂತರ ನಗರದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು.