ರಾಜ್ಯದಲ್ಲಿ ಕೊರೊನಾ ಮಹಾಮಾರಿ ತನ್ನ ರುದ್ರನರ್ತನ ಆರಂಭಿಸಿದೆ. ಶನಿವಾರ ಒಂದೇ ದಿನ 216 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ಸಮೀಪಿಸಿದೆ.
ಇದರ ಮಧ್ಯೆ ಕರ್ನಾಟಕದ ಯುವಕನೊಬ್ಬ ಕೊರೊನಾ ಔಷಧಿ ಪ್ರಯೋಗಕ್ಕೆ ನನ್ನ ದೇಹವನ್ನು ಬಳಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಯುವಕ ವೀರೇಶ ಕುರುವತ್ತಿ ಪತ್ರ ಬರೆದಿದ್ದು, ಗದಗ ಸರ್ಕಾರಿ ಐಟಿಐ ಕಾಲೇಜಿನ ಸಿವಿಲ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಇವರು ಕೊರೊನಾ ಲಸಿಕೆ ಪ್ರಯೋಗಕ್ಕೆ ಆರೋಗ್ಯವಂತ ವ್ಯಕ್ತಿಗಳು ಬೇಕು ಎನ್ನುವ ವರದಿ ನೋಡಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.