ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ಇದರ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ. ಈ ಮಾರಣಾಂತಿಕ ಸೋಂಕು ಬಹು ವೇಗವಾಗಿ ಹರಡುವುದೇ ಇದಕ್ಕೆ ಕಾರಣ.
ಭಾರತದಲ್ಲಿ ಕರೋನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈವರೆಗೆ ಇದಕ್ಕೆ 1123 ಮಂದಿ ಬಲಿಯಾಗಿದ್ದಾರೆ. 35 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದು, ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕರ್ನಾಟಕದಲ್ಲೂ ಕರೋನಾ ವ್ಯಾಪಕವಾಗಿದ್ದು, ಇದಕ್ಕೆ ಈವರೆಗೆ 25 ಮಂದಿ ಬಲಿಯಾಗಿದ್ದಾರೆ.
ಈ ಮಧ್ಯೆ ಕರೋನಾ ಸೋಂಕು ಹರಡುವಿಕೆ ಕುರಿತಂತೆ ಶಾಕಿಂಗ್ ಸಂಗತಿಯೊಂದು ಬಹಿರಂಗವಾಗಿದೆ. ಕರ್ನಾಟಕದಲ್ಲಿ ಕೇವಲ ಎಂಟು ಜನರಿಂದ 76 ಮಂದಿಗೆ ಸೋಂಕು ಹರಡಿರುವುದು ಈಗ ಪತ್ತೆಯಾಗಿದೆ. ಒಟ್ಟು ಪ್ರಕರಣಗಳ ಪೈಕಿ ಶೇಕಡ 36.5 ಪ್ರಕರಣಗಳು ಈ ಎಂಟು ಜನರಿಂದ ಹರಡಿದೆ ಎಂದು ಹೇಳಲಾಗಿದೆ.