ಚೀನಾದಲ್ಲಿ ಆರಂಭವಾದ ಕರೋನಾ ಮಹಾಮಾರಿ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕರೋನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಿದೆ.
ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಉದ್ಯಮ ವಲಯ ಸಂಪೂರ್ಣವಾಗಿ ಬಂದ್ ಆಗಿತ್ತು. ಇದೀಗ ಕೇಂದ್ರ ಸರ್ಕಾರ ಲಾಕ್ಡೌನ್ ನಲ್ಲಿ ಕೆಲವೊಂದು ಸಡಿಲಿಕೆಗಳನ್ನು ಮಾಡಿದ್ದು ವ್ಯಾಪಾರ ವಹಿವಾಟು ನಿಧಾನವಾಗಿ ಆರಂಭವಾಗುತ್ತಿದೆ.
ಆದರೆ ಉದ್ಯಮ ವಲಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿರುವ ಪರಿಣಾಮ ಹೊಸಬರು ಉದ್ಯೋಗ ಪಡೆಯುವುದಿರಲಿ ಹಾಲಿ ಉದ್ಯೋಗದಲ್ಲಿರುವವರೇ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದರ ಮಧ್ಯೆ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ.
ಕೃಷಿ ಇಲಾಖೆಯಡಿ 3,320 ರೈತಮಿತ್ರರ ನೇಮಕಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ವೃಂದ ಮತ್ತು ನೇಮಕಾತಿ ನಿಯಮ ರೂಪಿತವಾದ ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.