ರಾಜ್ಯದಲ್ಲಿ ಇಂದು 22 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ 456 ಜನ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಇಂದು ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.
ಹೌದು, ಇಂದು ದಾವಣಗೆರೆ 3, ಮಂಡ್ಯ 4, ಬೆಂಗಳೂರು 5, ಗದಗ 4, ಬೀದರ್ 4, ಬಾಗಲಕೋಟೆ 1, ಬೆಳಗಾವಿ 1 ಒಟ್ಟು 22 ಪ್ರಕರಣ ದಾಖಲಾಗಿದೆ. ಇದರಲ್ಲಿ ಬೆಂಗಳೂರಿನ 5 ಮಂದಿ ಕೊರೊನಾ ಸೋಂಕಿತರು ಪಾದರಾಯನಪುರದವರು. ಇಲ್ಲಿ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಗೆ ಸೋಂಕು ತಗುಲಿದೆ. ಪೇಷೆಂಟ್ ನಂಬರ್ 554 ರಿಂದ ನಾಲ್ಕು ಜನರಿಗೆ ಹಾಗೂ ಪೇಷೆಂಟ್ ನಂಬರ್ 555 ರಿಂದ ಒಬ್ಬರಿಗೆ ಸೋಂಕು ತಗುಲಿದೆ.
ಇನ್ನು ಮಂಡ್ಯದಲ್ಲಿನ ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದರೆ ಈ ನಾಲ್ಕು ಮಂದಿಗೂ ಮುಂಬೈ ಪ್ರಯಾಣದ ಬೆನ್ನಲ್ಲೇ ಸೋಂಕು ತಗುಲಿದೆ. ಇನ್ನು ಗದಗ ಸೋಂಕಿತರಿಗೆ ಅಹಮದಾಬಾದ್ ಟ್ರಾವೆಲ್ ಹಿಸ್ಟರಿ ಇದೆ. ದಾವಣಗೆರೆಯಲ್ಲಿ ಒಬ್ಬರಿಗೆ 852 ರ ಸಂಪರ್ಕದಿಂದ ಸೋಂಕು ಬಂದಿದ್ದು, ಮತ್ತೊಬ್ಬರಿಗೆ ದಾವಣಗೆರೆಯ ಕಂಟೈನ್ಮೆಂಟ್ ಜೋನ್ಗೆ ಭೇಟಿ ಹಿನ್ನೆಲೆ ಸೋಂಕು ತಗುಲಿದೆ. ಇನ್ನು ಬೀದರ್ನಲ್ಲಿ ಮೂರು ಮಂದಿಗೆ ಕಂಟೈನ್ಮೆಂಟ್ ಜೋನ್ಗೆ ಭೇಟಿ ಹಿನ್ನೆಲೆ ಸೋಂಕು ತಗುಲಿದ್ದರೆ, ಮತ್ತೊಬ್ಬ ಮಹಿಳೆಗೆ ಅಹಮದಾಬಾದ್ ಪ್ರಯಾಣ ಹಿನ್ನೆಲೆಯಲ್ಲಿ ಸೋಂಕು ತಗುಲಿದೆ.
ಸೋಂಕಿತರನ್ನ ಈಗಾಗಲೇ ಪ್ರತ್ಯೇಕವಾಗಿಸಿ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನ ಪರೀಕ್ಷೆಗೆ ಒಳಪಡಿಸಿ ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಮನೆ ಮಾಡಿದೆ.