ಆರಂಭದಲ್ಲಿ ನಿಯಂತ್ರಣಕ್ಕೆ ಬಂದಂತಿದ್ದ ಕೊರೊನಾ ಮಹಾಮಾರಿ ಈಗ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಭಾನುವಾರ ಒಂದೇ ದಿನ 54 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಈ ಮಾರಣಾಂತಿಕ ಸೋಂಕಿಗೆ ರಾಜ್ಯದಲ್ಲಿ ಈಗಾಗಲೇ 31 ಮಂದಿ ಬಲಿಯಾಗಿದ್ದು, 848 ಸೋಂಕಿತರು ಪತ್ತೆಯಾಗಿದ್ದಾರೆ. ಮೂರನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಹಲವು ಸಡಿಲಿಕೆಗಳನ್ನು ನೀಡಲಾಗಿದ್ದು, ಸೋಂಕು ಏರಿಕೆಗೆ ಕಾರಣವೆಂದು ಹೇಳಲಾಗುತ್ತಿದೆ.
ಇದರ ಮಧ್ಯೆ ಕೆಲವರು ಕಳ್ಳ ಮಾರ್ಗದಲ್ಲಿ ಕರ್ನಾಟಕದ ಗಡಿ ಪ್ರವೇಶಿಸುತ್ತಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಉಲ್ಬಣಿಸಲಿದೆ ಎಂಬ ಆತಂಕಕ್ಕೆ ಕಾರಣವಾಗಿದೆ. ಅಧಿಕೃತವಾಗಿ ರಾಜ್ಯದೊಳಗೆ ಬಂದರೆ ಅಂತಹವರ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವುದರಿಂದ ಸೋಂಕು ಇದ್ದರೆ ಪತ್ತೆಯಾಗುತ್ತದೆ.
ಆದರೆ ಕಳ್ಳ ಮಾರ್ಗದಲ್ಲಿ ಬರುವವರು ತಾವು ಸಿಕ್ಕಿಬೀಳುವ ಭಯದಲ್ಲಿ ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕುತ್ತಾರೆ. ಒಂದೊಮ್ಮೆ ಇವರ ಪೈಕಿ ಯಾರಿಗಾದರೂ ಕೊರೊನಾ ಸೋಂಕು ಇದ್ದರೆ ಇದು ಬೇರೆಯವರಿಗೂ ವ್ಯಾಪಿಸುತ್ತದೆ.
ಕಳ್ಳ ಮಾರ್ಗದಲ್ಲಿ ಗಡಿ ಪ್ರವೇಶಿಸುವ ಪ್ರಕರಣಗಳಿಗೆ ಉದಾಹರಣೆಯೆಂಬಂತೆ ಅಜ್ಮೀರ್ ಪ್ರವಾಸಕ್ಕೆ ತೆರಳಿದ್ದ 38 ಮಂದಿಯನ್ನು ಗಡಿಯೊಳಗೆ ಬಿಟ್ಟುಕೊಳ್ಳದೆ ವಾಪಸ್ ಕಳುಹಿಸಲಾಗಿತ್ತು. ಆದರೆ ಇವರುಗಳು ಕಳ್ಳ ಮಾರ್ಗದಲ್ಲಿ ಬೆಳಗಾವಿ ಜಿಲ್ಲೆ ಪ್ರವೇಶಿಸಿದ್ದು, ಬಳಿಕ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಇವರುಗಳ ಆರೋಗ್ಯ ತಪಾಸಣೆ ವೇಳೆ ಕೆಲವರಿಗೆ ಕೊರೊನಾ ಸೋಂಕು ಇರುವುದು ಕಂಡು ಬಂದಿದೆ ಎನ್ನಲಾಗಿದೆ. ಅಧಿಕಾರಿಗಳು ಸಕಾಲಿಕ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಮಟ್ಟದಲ್ಲಿ ಸೋಂಕು ಹರಡುವುದು ತಪ್ಪಿದಂತಾಗಿದೆ.