alex Certify ಬಡವರ ಕಣ್ಣೊರೆಸಲೆಂದೆ ಜನತಾ ದರ್ಶನ, ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರ ಕಣ್ಣೊರೆಸಲೆಂದೆ ಜನತಾ ದರ್ಶನ, ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ರಾಜ್ಯದಲ್ಲಿ ನಮ್ಮ‌ ಸರ್ಕಾರ ಬಂದ ನಂತರ ಪಂಚ‌ ಗ್ಯಾರಂಟಿ ಗಳಲ್ಲಿ 4 ಗ್ಯಾರಂಟಿ ಪೂರೈಸುವ ಮೂಲಕ ನುಡಿದಂತೆ ನಡೆದಿದ್ದೆವೆ. ಇದೀಗ ಜನರ ಕಷ್ಟ, ದುಃಖ ದುಮ್ಮಾನುಗಳನ್ನು ಆಲಿಸಲು ಜನತಾ ದರ್ಶನ ಮೂಲಕ ಜನರ‌ ಬಳಿಗೆ ಹೋಗಿ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳು ಪ್ರಮಾಣಿತ ಪ್ರಯತ್ನ ಇದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಈ ಭಾಗದ ಮಿನಿ ಮಳೆ ನಾಡೆಂದೆ ಕರೆಸಿಕೊಳ್ಳುವ ಚಿಂಚೋಳಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಚೊಚ್ಚಲ “ಜನತಾ ದರ್ಶನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಅಂದರೆ, ಜನರಿಂದ, ಜನರಿಗೆ ಹಾಗೂ ಜನರಿಗೋಸ್ಕರ್ ಇರುವ ವ್ಯವಸ್ಥೆಯಾಗಿದೆ. ಇದಕ್ಕಾಗಿ ಇಂದು ನಿಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದ ಅವರು, ಇನ್ನು ಮುಂದೆ ಪ್ರತಿ ತಾಲೂಕಿನಲ್ಲಿ ಪ್ರತಿ ಮಾಹೆ ಈ ರೀತಿ “ಜನತಾ ದರ್ಶನ” ಅರ್ಥಾತ್ “ಜನಸ್ಪಂದನ” ಕಾರ್ಯಕ್ರಮ ಮಾಡಲಾಗುತ್ತದೆ. ಇಡೀ ದಿನ ನಿಮ್ಮೊಂದಿಗಿದ್ದು, ಸಮಸ್ಯೆಗೆ ಇತಿಶ್ರೀ ಹಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸಮಸ್ಯೆ ಹೊತ್ತು ಕ್ಷೇತ್ರ, ಜಿಲ್ಲೆಯ ಜನ ಬೆಂಗಳೂರು ಅಲೆಯುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕರ ಸಮಯ ಉಳಿಸಲು ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಇದಕ್ಕೆ ಪೂರಕವಾಗಿ ಮೋಬೈಲ್ ಮೂಲಕವೇ ತಮ್ಮ‌ ಸಮಸ್ಯೆ ದಾಖಲಿಸಲು ಈಗಾಗಲೆ ” ಕಲಬುರಗಿ ಕನೆಕ್ಟ್” ಜಾರಿಗೊಳಿಸಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ತಂತ್ರಾಂಶದಲ್ಲಿ ಸಲ್ಲಿಕೆಯಾದ 560 ಅರ್ಜಿಗಳಲ್ಲಿ 300ಕ್ಕೂ ಹೆಚ್ಚು ಇತ್ಯರ್ಥಗೊಳಿಸಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸಹ ಜಾರಿಗೆ ತರಲಾಗಿದೆ. ಇಲ್ಲಿಯೂ ಇದೂವರೆಗೆ 900 ಜನರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಜನರೊಂದಿಗೆ ಸ್ಪಂದಿಸುತ್ತಿರುವ ರೀತಿ ದಾಖಲಿಸಿದ್ದಾರೆ. ಪ್ರಜಾ ಧ್ವನಿಯಾಗಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ  ಎಂದರು.

ಪಂಚ ಗ್ಯಾರಂಟಿಗಳು ಮಹಿಳಾ ಸಬಲೀಕರಣದ‌ ಜೊತೆಗೆ ರಾಜ್ಯದ ಜನರಲ್ಲಿನ ಆರ್ಥಿಕ ಸ್ಥಿರತೆ ಕಾಪಾಡುವ ಉದ್ದೇಶ ಹೊಂದಿದೆ. ಶಕ್ತಿ ಯೋಜನೆಯಡಿ ಪ್ರತಿ ದಿನ ರಾಜ್ಯದಲ್ಲಿ 65 ಲಕ್ಷ ಜನ ಉಚಿತ ಪ್ರಯಾಣ ಮಾಡುತ್ತಿದ್ದಾರೆ. 200 ಯೂನಿಟ್ ಉಚಿತ್ ವಿದ್ಯುತ್ ಲಾಭ ಸಿಗುತ್ತಿದೆ. ಗೃಹ ಲಕ್ಷ್ಮೀಯಲ್ಲಿ ನೀಡಲಾಗುತ್ತಿರುವ 2,000 ರೂ. ಮಕ್ಕಳ ಮನೆ ಪಾಠ, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಅನ್ನ ಭಾಗ್ಯ ಯೋಜನೆ ಬಹುಜನರ ಹಸಿವು ನೀಗಿಸಿದೆ ಎಂದರು.

ಕಲ್ಯಾಣ‌ ಕರ್ನಾಟಕ ಅಭಿವೃದ್ಧಿಗೆ ಬದ್ಧ:

ನಮ್ಮ ಸರ್ಕಾರ ದಾಖಲೆ ಪ್ರಮಾಣದಲ್ಲಿ ಈ ಬಾರಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ 5,000 ಕೋಟಿ ರೂ. ಘೋಷಿಸಿ 3,000 ಕೋಟಿ ರೂ. ಬಿಡುಗಡೆ ಮಾಡಿದೆ. ಕೇವಲ ಚಿಂಚೋಳಿ ಅಷ್ಟೆ ಅಲ್ಲ, ಕಲಬುರಗಿ ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ತಾವು ಬದ್ದ ಎಂದ ಸಚಿವ‌ ಪ್ರಿಯಾಂಕ್ ಖರ್ಗೆ ಹೇಳಿದರು.

ಸಮುದಾಯ ಭವನದಂತೆ ಸಮುದಾಯ ಶೌಚಾಲಯಕ್ಕೂ ಮಹತ್ವ ಕೊಡಿ:

ಪ್ರದೇಶದಲ್ಲಿ ಮೊದಲನೇ  ಹಂತವಾಗಿ 400 ಗ್ರಾಮ‌ ಪಂಚಾಯತಿಯಲ್ಲಿ ತಲಾ‌ 30 ಲಕ್ಷ ವೆಚ್ಚದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದರ ನಿರ್ವಹಣೆ ಗ್ರಾಮ ಪಂಚಾಯತಿ ಮಾಡಬೇಕು. ಹಿಂದೆಯೂ ಅನೇಕ ಶೌಚಾಲಯ ಕಟ್ಟಡ ನಿರ್ಮಿಸಲಾಗಿದ್ದರೂ ನಿರ್ವಹಣೆ ಇಲ್ಲದ ಕಾರಣ ಯಶ ಕಂಡಿಲ್ಲ. ಇದು ಯಶಸ್ವಿಯಾಗಬೇಕಾದರೆ ಜನರ ಸಹಕಾರ ತುಂಬಾನೆ ಅವಶ್ಯಕತೆ ಇದ್ದು, ಜಿಲ್ಲಾ ಪಂಚಾಯತ್ ಸಿ.ಇ.ಓ ಇದರ‌ ನಿರ್ವಹಣೆಯ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.

ಚಿಂಚೋಳಿಗೆ ಹೆಚ್ಚು ಅನುದಾನ ಕೊಡಿ:

ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ  ವರದಿಯಲ್ಲಿ ಕೊನೆ ಸ್ಥಾನ ಚಿಂಚೋಳಿಗಿದೆ. ಗಡಿ ತಾಲೂಕು ಇದಾಗಿರುವುದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಚಿಂಚೋಳಿ ತಾಲೂಕಿನಿಂದಲೆ ಜನತಾ ದರ್ಶನ ಆರಂಭಗೊಳಿಸಿದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ತಿಳಿಸಿದರು.

ಇದು ಬಡವರ ಸಮಾವೇಶ:

ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ ಮಾತನಾಡಿ, ಚಿಂಚೋಳಿಯಲ್ಲಿ ಈ ಜನಸ್ಪಂದನ ಕಾರ್ಯಕ್ರಮ ಬಡವರ ಸಮಾವೇಶವಾಗಿ ಪರಿವರ್ತನೆಯಾಗಿದೆ ಎಂದರೆ ತಪ್ಪಾಗಲಾರದು. ಸಚಿವ ಪ್ರಿಯಾಂಕ್ ಖರ್ಗೆ ಎದುರು ಸಮಸ್ಯೆ ಹೇಳಿದರೆ ಅದಕ್ಕೆ ಪರಿಹಾರ ಶಾಶ್ವತ ಎಂದು ನಂಬಿ ಇಲ್ಲಿ ಸಾವಿರಾರು ಜನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ  ಅವರು ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸರ್ಕಾರದ ಸಂಪುಟದಲ್ಲಿ “ಪವರ್ ಫುಲ್ ಮಿನಿಸ್ಟರ್” ಇವರಾಗಿದ್ದಾರೆ ಎಂದರು.

ಇದಕ್ಕು‌ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ತೆರೆಯಲಾದ ಆಹಾರ, ಕೃಷಿ‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ರೇಷ್ಮೆ , ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ಚಿಂಚೋಳಿ ಪುರಸಭೆ, ಕಾರ್ಮಿಕ, ಪೊಲೀಸ್, ಕಂದಾಯ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹೀಗೆ ಪ್ರಮುಖ ಇಲಾಖೆಯ ಮಳಿಗೆ ಉದ್ಘಾಟಿಸಿದರು. ಸಾರ್ವಜನಿಕರು ಅರ್ಜಿ ಸಲ್ಲಿಸಲು ಇಲಾಖಾವಾರು 15 ಕೌಂಟರ್ ಸ್ಥಾಪಿಸಲಾಗಿತ್ತು. ಜನತಾ ದರ್ಶನ  ಸವಿನೆನಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಆದಿಯಾಗಿ ಗಣ್ಯರು, ಕ್ರೀಡಾಂಗಣ ಅವರಣದಲ್ಲಿ ಸಸಿ‌ ನೆಟ್ಟು ನೀರುಣಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...