ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗೊಂಗುಲೂರು ಬುಡಕಟ್ಟು ಗ್ರಾಮದಲ್ಲಿ ಮಕ್ಕಳನ್ನು ಸಾಕಲು ಸಾಧ್ಯವಾಗದೆ ರೈತ ತನ್ನ 4 ವರ್ಷದ ಮಗಳ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ರೈತನಿಗೆ ಮೂವರು ಮಕ್ಕಳಿದ್ದು ಸಾಕಲು ಸಾಧ್ಯವಾಗುತ್ತಿಲ್ಲ ಎಂದು 4 ವರ್ಷದ ಮಗಳನ್ನು ಗುರುವಾರ ಕೊಲೆ ಮಾಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಡತನದ ಕಾರಣದಿಂದ ರೈತ ವಿಪರೀತ ಸಾಲ ಮಾಡಿಕೊಂಡಿದ್ದು, ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಲಾಕ್ ಡೌನ್ ಜಾರಿಯಾದ ನಂತರ ಅವರ ಪರಿಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ರೈತನಿಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದು ಸಂಕಷ್ಟ ಇರುವುದರಿಂದ ಮಕ್ಕಳನ್ನು ಸಾಕಲು ಸಾಧ್ಯವಾಗುವುದಿಲ್ಲ ಎಂದು ಒಬ್ಬ ಮಗಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಮನೆಯವರೆಲ್ಲ ಮಲಗಿದ್ದ ವೇಳೆಯಲ್ಲಿ 4 ವರ್ಷದ ಮಗಳನ್ನು ಮಧ್ಯರಾತ್ರಿ ಮನೆಯಿಂದ ಹೊರಗೆ ಎತ್ತಿಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಮಗಳು ಕಾಣುತ್ತಿಲ್ಲ ಎಂದು ಮನೆಯವರನ್ನು ನಿದ್ದೆಯಿಂದ ಎಬ್ಬಿಸಿ ತಾನೂ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಮನೆ ಸಮೀಪದಲ್ಲೇ ರಕ್ತದ ಮಡುವಿನಲ್ಲಿ ಮಗಳ ಮೃತದೇಹ ಕಂಡು ಬಂದಿದೆ. ಪೊಲೀಸರು ಪರಿಶೀಲನೆ ನಡೆಸಿ ರೈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಬಗ್ಗೆ ಮಾಹಿತಿ ನೀಡಿದ್ದಾನೆ. ಬಡತನದಿಂದ ಮಕ್ಕಳನ್ನು ಸಾಕಲು ಸಾಧ್ಯವಾಗದೇ ಇಂತಹ ಕೃತ್ಯವೆಸಗಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದಾನೆನ್ನಲಾಗಿದೆ.