ನಟ ಸುಶಾಂತ್ ಸಿಂಗ್ ರಜಪೂತ್ರ ಮಹಾನ್ ಬುದ್ಧಿವಂತಿಕೆ ಹಾಗೂ ಅಪಾರ ಜ್ಞಾನದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಲೇ ಇದ್ದು, ಅವರ ನಿಧನಕ್ಕೆ ಈಗಲೂ ಕಂಬನಿ ಮಿಡಿಯುತ್ತಿದ್ದಾರೆ.
ಇಂಜಿಯನಿಯರಿಂಗ್ ಪದವಿ ಪೂರೈಸಿದ್ದ ಸುಶಾಂತ್ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಅಪಾರವಾದ ಪರಿಣಿತಿ ಹೊಂದಿದ್ದರು. ಅಲ್ಲದೇ, ವೈಜ್ಞಾನಿಕ ಕ್ಷೇತ್ರದಲ್ಲಿ ಆಗುತ್ತಿರುವ ದೈನಂದಿನ ಬದಲಾವಣೆಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು.
ಶಾಲಾ ಪಠ್ಯದಲ್ಲಿ ಕೋಡಿಂಗ್ ಮಾಡುವ ವಿಚಾರವನ್ನು ಪರಿಚಯಿಸಬೇಕೆಂದು ಸಂದರ್ಶನವೊಂದರಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ಸುಶಾಂತ್, “ಈಗ ಕಿಂಡರ್ ಗಾರ್ಟನ್ಗೆ ಹೋಗುತ್ತಿರುವ 65%ನಷ್ಟು ಮಕ್ಕಳು ಮುಂದಿನ ದಿನಗಳಲ್ಲಿ ನಾವಿನ್ನೂ ಆವಿಷ್ಕರಿಸದೇ ಇರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಶಾಲೆಗಳಲ್ಲೂ ಸಹ ಏನನ್ನು ಕಲಿಸಬೇಕೆಂಬ ಸುಳಿವು ಇಲ್ಲ. ಭವಿಷ್ಯದ ಭಾಷೆಯಾಗಲಿರುವ ಕೋಡಿಂಗ್ ಅನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು” ಎಂದಿದ್ದರು.
ಇದೀಗ ಹೊಸದಾಗಿ ಮುನ್ನೆಲೆಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಆರನೇ ತರಗತಿಯಿಂದ ಕೋಡಿಂಗ್ ಅನ್ನು ಮಕ್ಕಳಿಗೆ ಕಲಿಸಲಾಗುವುದು ಎಂದು ತಿಳಿಸಲಾಗಿದೆ. ಮೇಧಾವಿ ನಟನ ದೂರದೃಷ್ಟಿ ಎಂಥದ್ದಿತ್ತು ಎಂದು ಅವರ ಈ ನುಡಿಗಳು ಸಾರಿ ಹೇಳುತ್ತಿವೆ.