ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವಗಳ ಮಗ್ಗುಲಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಶವಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಬೆಡ್ ಮೇಲೆಯೇ ಮಲಗಿಸಲಾಗಿದೆ. ಅದರ ಅಕ್ಕಪಕ್ಕದ ಬೆಡ್ ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾರ್ಡ್ನಲ್ಲಿ ಹಲವು ರೋಗಿಗಳು ಇದ್ದು ಅವರ ಮಗ್ಗುಲಲ್ಲಿರುವ ಬೆಡ್ ಗಳ ಮೇಲೆ ಅಲ್ಲಲ್ಲಿ ಮೃತದೇಹಗಳು ಕೂಡ ಕಂಡುಬಂದಿವೆ.
ಸಿಯಾನ್ ಕೋವಿಡ್ -19 ಆಸ್ಪತ್ರೆ ನರಕ ಸದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಬಿಜೆಪಿ ಶಾಸಕ ನಿತೀಶ್ ರಾಣೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಗ್ಗುಲಲ್ಲೇ ಮೃತದೇಹಗಳನ್ನು ನೋಡಿ ಬೇಸರವಾಯಿತು. ಇಂತಹ ಆಡಳಿತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಕೂಡ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಯಾನ್ ಆಸ್ಪತ್ರೆಯ ಘಟನೆ ಅತ್ಯಂತ ಗಂಭೀರ ಮತ್ತು ಆಘಾತಕಾರಿಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮೃತ ದೇಹದ ಪಕ್ಕದಲ್ಲಿ ಮಲಗಿದ್ದಾರೆ. ಇದು ಅಮಾನವೀಯವಾದದ್ದು, ಮುಂಬೈನಲ್ಲಿ ಇದನ್ನು ನೋಡಿಕೊಳ್ಳಲು ಯಾರೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಆಡಳಿತಾಧಿಕಾರಿಗಳು ಪ್ರತಿಕ್ರಿಯೆ ನೀಡಿ, ಶವಾಗಾರದಲ್ಲಿ ಮೃತದೇಹಗಳು ಜಾಸ್ತಿಯಾಗಿವೆ. ಕೊರೋನಾ ಸೋಂಕಿನಿಂದ ಮೃತಪಟ್ಟವರು ಮತ್ತು ಬೇರೆ ಕಾಯಿಲೆಯಿಂದ ಸಾವನ್ನಪ್ಪಿದವರ ಶವಗಳನ್ನು ಶವಾಗಾರದಲ್ಲಿ ಇಡಲಾಗಿದೆ.
ಕೊರೋನಾದಿಂದ ಮೃತಪಟ್ಟವರ ಶವಗಳನ್ನು ಸಂಬಂಧಿಕರು ತೆಗೆದುಕೊಂಡು ಹೋಗುವುದಿಲ್ಲ. ಬೇರೆ ಕಾಯಿಲೆಯಿಂದ ಮೃತಪಟ್ಟವರ ಮೃತದೇಹಗಳು ಕೂಡ ಶವಾಗಾರದಲ್ಲಿದ್ದು, ವಾರ್ಡ್ ನಲ್ಲಿದ್ದ ಮೃತದೇಹಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.