ನವದೆಹಲಿ: ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೋರಾಟ ನಡೆಸಲು 50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ಪಿಎಂ ಕೇರ್ಸ್ ನಿಧಿಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿದೆ.
ನಿಧಿಯಿಂದ ಇದೇ ಮೊದಲ ಬಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. 3,100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು 2 ಸಾವಿರ ಕೋಟಿ ರೂಪಾಯಿಗಳನ್ನು ವೆಂಟಿಲೇಟರ್ ಖರೀದಿಗೆ, 1000 ಕೋಟಿ ರೂಪಾಯಿಗಳನ್ನು ವಲಸೆ ಕಾರ್ಮಿಕರ ಹಿತ ರಕ್ಷಣೆಗೆ ಮತ್ತು 100 ಕೋಟಿ ರೂಪಾಯಿಗಳನ್ನು ಕೊರೋನಾ ಲಸಿಕೆ ಸಂಶೋಧನೆಗೆ ನೆರವಾಗಲು ಬಿಡುಗಡೆ ಮಾಡಲಾಗಿದೆ.
2000 ಕೋಟಿ ರೂಪಾಯಿ ಮೊತ್ತದಲ್ಲಿ 50,000 ವೆಂಟಿಲೇಟರ್ ಖರೀದಿಸಿ ಆಸ್ಪತ್ರೆಗಳಿಗೆ ನೀಡಲಾಗುವುದು. ಅದೇ ರೀತಿ 1,000 ಕೋಟಿ ರೂಪಾಯಿ ವೆಚ್ಚದಲ್ಲಿ ವಲಸೆ ಕಾರ್ಮಿಕರ ವಸತಿ, ಆಹಾರ, ವೈದ್ಯಕೀಯ ನೆರವು, ಸಾರಿಗೆ ವೆಚ್ಚಕ್ಕೆ ಬಳಸಲು ತೀರ್ಮಾನಿಸಲಾಗಿದೆ. ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ವಿನಾಯಿತಿ ಇದ್ದು ಭಾರೀ ಪ್ರಮಾಣದ ದೇಣಿಗೆ ಹರಿದುಬಂದಿದೆ.