ಜೋಧ್ ಪುರ: ಯುವಕನ ಪ್ರೀತಿಸಿ ಓಡಿಹೋಗಿದ್ದ ಬಾಲಕಿಯನ್ನು ತಾಯಿ ಮತ್ತು ಚಿಕ್ಕಪ್ಪ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಶಂಕಿತ ಮರ್ಯಾದೆಗೇಡು ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಹೂತಿಟ್ಟಿದ್ದ ಮೃತ ದೇಹದ ಭಾಗಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತ ಮೃತ ಬಾಲಕಿಯ ತಾಯಿ ಸೀತಾದೇವಿ ಮತ್ತು ಚಿಕ್ಕಪ್ಪ ಸವರಮ್ ಅವರನ್ನು ಬಂಧಿಸಲಾಗಿದೆ.
ಪಾಲಿ ಜಿಲ್ಲೆಯ ಸೋನಾಯ್ ಮಾಜ್ಹಿ ಗ್ರಾಮದ ರಿಂಕು ಶೇಷರಮ್ ಮತ್ತು ಸವರಮ್ ಕುಟುಂಬದವರು ಅನೇಕ ವರ್ಷಗಳಿಂದ ಪುಣೆಯಲ್ಲಿ ನೆಲೆಸಿದ್ದು ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ರಿಂಕು ಶೇಷರಮ್ ಪುತ್ರಿಯಾಗಿರುವ 16 ವರ್ಷದ ಬಾಲಕಿ ಪುಣೆಯಲ್ಲಿ ಯುವಕನೊಬ್ಬನನ್ನು ಪ್ರೀತಿಸಿ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಪೊಲೀಸರಿಗೆ ದೂರು ನೀಡಿ ಅವರನ್ನು ಪತ್ತೆ ಹಚ್ಚಲಾಗಿತ್ತು.
ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಬಾಲಕಿ ಪೋಷಕರೊಂದಿಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ಆದರೆ ಮಗಳನ್ನು ಯುವಕನಿಗೆ ಮದುವೆ ಮಾಡಿಕೊಡಲು ಒಪ್ಪಿಲ್ಲ. ದೇವಾಲಯಕ್ಕೆ ಹೋಗಿ ಬರುವುದಾಗಿ ರಾಜಸ್ತಾನಕ್ಕೆ ಬಾಲಕಿಯನ್ನು ಕರೆದುಕೊಂಡು ಹೋದ ಸೀತಾದೇವಿ ಮತ್ತು ಚಿಕ್ಕಪ್ಪ ಸವರಮ್ ಮಾರ್ಚ್ 19 ರಂದು ಬಾಲಕಿಯನ್ನು ಕೊಂದು ಮನೆಗೆ ವಾಪಸಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಅವರಿಬ್ಬರನ್ನು ಬಂಧಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪಾಲಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ರಾಹುಲ್ ಕೋಟೋಕಿ ತಿಳಿಸಿದ್ದಾರೆ.