ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ, ದಿನಕ್ಕೊಂದು ಚಿತ್ರ ವಿಚಿತ್ರ ಹೇಳಿಕೆಗಳು ಬರುತ್ತಿವೆ. ಕೊರೊನಾಗೆ ಮದ್ದು ಸಿಗದಿದ್ದರೂ, ಅನೇಕರು ತಮ್ಮ ಉತ್ಪನ್ನದಿಂದ ಕೊರೊನಾ ಓಡಿಸಬಹುದು ಎಂದು ವಾದಿಸಿದ್ದಾರೆ. ಇದಕ್ಕೆ ಇದೀಗ ಕೇಂದ್ರದ ಸಚಿವರೊಬ್ಬರು ಸೇರಿದ್ದಾರೆ.
ಹೌದು, ಕೇಂದ್ರ ಕೈಗಾರಿಕಾ ಖಾತೆ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಇತ್ತೀಚೆಗಷ್ಟೇ ಹಪ್ಪಳವನ್ನು ಬಿಡುಗಡೆಗೊಳಿಸಿದ್ದು, ಈ ವೇಳೆ ಇದರಿಂದ ಕೊರೊನಾ ಹೋಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಇದೀಗ ಈ ಮಾತು ಭಾರಿ ವೈರಲ್ ಆಗಿದೆ.
ಕೇಂದ್ರ ಸರಕಾರದ ಆತ್ಮ ನಿರ್ಭರ ಯೋಜನೆಯಲ್ಲಿ ಭಾಬಿ ಜಿ ಪಾಪಡ್ ಎನ್ನುವ ಹಪ್ಪಳ ಮಾರುಕಟ್ಟೆಗೆ ಬಂದಿದೆ. ಇದನ್ನು ಬಿಡುಗಡೆಗೊಳಿಸುವಾಗ, ಮೇಘ್ವಾಲ್ ಈ ಮಾತನ್ನು ಹೇಳಿದ್ದಾರೆ. ಈ ಹಪ್ಪಳದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದು, ಇದರಿಂದ ಕೊರೊನಾ ತಡೆಯಬಹುದು ಎಂದಿದ್ದಾರೆ. ಮೇಘ್ವಾಲ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.