ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನ ಮುಂದುವರೆದ ನೆರವಿನ ಯೋಜನೆಗಳ ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ ಜಾರಿಯಾಗಿದ್ದರಿಂದ ವಲಸೆ ಕಾರ್ಮಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಉದ್ಯೋಗದ ಸ್ಥಳವನ್ನು ತೊರೆದು ಸ್ವಂತ ಗ್ರಾಮಗಳಿಗೆ ಹಿಂತಿರುಗಿದ್ದಾರೆ. ಇಂತಹ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ಬಳಸಿಕೊಂಡು ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಪಡಿತರ ಚೀಟಿ ಹೊಂದಿರುವ ವಲಸೆ ಕಾರ್ಮಿಕರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ, 1 ಕೆಜಿ ಬೇಳೆಕಾಳು ನೀಡಲಾಗುವುದು. ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಅವರು ಇರುವ ಸ್ಥಳದಲ್ಲಿ ಪಡಿತರ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ನೀಡಲಾಗಿದೆ.
2020ರ ಆಗಸ್ಟ್ ವೇಳೆಗೆ ಶೇಕಡ 83 ರಷ್ಟು ಕಾರ್ಡ್ ಗಳನ್ನು ಯೋಜನೆಗೆ ಒಳಪಡಿಸಲಾಗುವುದು. 2021 ರ ಮಾರ್ಚ್ ವೇಳೆಗೆ ಶೇಕಡ 100 ರಷ್ಟು ಕಾರ್ಡುಗಳನ್ನು ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಗೆ ಒಳಪಡಿಸಲಾಗುವುದು. ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ವಲಸೆ ಕಾರ್ಮಿಕರು ಯಾವುದೇ ರಾಜ್ಯದ ತಾವಿರುವ ಸ್ಥಳದಲ್ಲಿ ಪಡಿತರವನ್ನು ಪಡೆಯಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.