ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ರುದ್ರತಾಂಡವವಾಡುತ್ತಿದ್ದು ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ.
ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ(ಬೆಸ್ಟ್) ಸಂಸ್ಥೆಯ 64 ಉದ್ಯೋಗಿಗಳಿಗೆ ಕೊರೋನಾ ಸೋಂಕು ತಗಲಿದ್ದು ನಾಲ್ವರು ಮೃತಪಟ್ಟಿದ್ದಾರೆ. ಕರ್ತವ್ಯನಿರತ ಸಂಸ್ಥೆಯ ಉದ್ಯೋಗಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದರೆ ಮೃತವ್ಯಕ್ತಿಯ ರಕ್ತಸಂಬಂಧಿಗೆ ಕೆಲಸ ನೀಡಲಾಗುವುದು ಎಂದು ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ರಕ್ತಸಂಬಂಧಿಗಳ ಶೈಕ್ಷಣಿಕ ಅರ್ಹತೆಯನ್ನು ಅವಲಂಬಿಸಿ ವಿವಿಧ ವರ್ಗದ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮೃತನ ಉದ್ಯೋಗಿಯ ಪತ್ನಿ, ಪುತ್ರ, ಅವಿವಾಹಿತ ಪುತ್ರಿ, ಮೃತ ಉದ್ಯೋಗಿ ಅವಿವಾಹಿತರಾಗಿದ್ದರೆ ಅವರ ಸಹೋದರ, ಅವಿವಾಹಿತ ಸಹೋದರರಿಗೆ ಕೆಲಸ ಕೊಡಲಾಗುವುದು ಎಂದು ಹೇಳಲಾಗಿದೆ.