ನವದೆಹಲಿ: ಮೇ 17 ಕ್ಕೆ ಲಾಕ್ ಡೌನ್ ಮುಕ್ತಾಯವಾಗಲಿದ್ದು, ಈಗಾಗಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿರುವ ಪ್ರಧಾನಿ ಮೋದಿ ಲಾಕ್ ಡೌನ್ ಮುಂದುವರೆಸುವ ಸುಳಿವು ನೀಡಿದ್ದಾರೆ.
ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದುವರೆಸುವಂತೆ ಒತ್ತಡ ಹೇರಿದ್ದು, ಮತ್ತೆ ಕೆಲವು ಮುಖ್ಯಮಂತ್ರಿಗಳು ಲಾಕ್ ಡೌನ್ ತೆರವು ಮಾಡಬಾರದೆಂದು ಮನವಿ ಮಾಡಿದ್ದಾರೆ.
ರೈಲು ಸಂಚಾರ ಕೊರೋನಾ ಹರಡಲು ಕಾರಣವಾಗುತ್ತದೆ. ಲಾಕ್ ಡೌನ್ ಕಂಟೇನ್ಮೆಂಟ್ ಜೋನ್ ಗೆ ಸೀಮಿತವಾಗಬೇಕು. ಬೇಸಿಗೆ ರಜೆಯ ಬಳಿಕ ಶಾಲಾ ಕಾಲೇಜು ಆರಂಭಿಸಬೇಕಿದೆ. ಸಾರ್ವಜನಿಕ ಸಾರಿಗೆ ಕೂಡ ಆರಂಭವಾಗಬೇಕಿದೆ. ಲಾಕ್ಡೌನ್ ನಿರ್ಧಾರ ಮುಖ್ಯಮಂತ್ರಿಗಳಿಗೆ ನೀಡಬೇಕು. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆ ಲಾಕ್ಡೌನ್ ಮುಂದುವರೆಸುವ ಬಗ್ಗೆ ರಾಜ್ಯಗಳಿಗೆ ಅವಕಾಶ ನೀಡಬೇಕು. ಹೀಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ವಿವಿಧ ಸಲಹೆಗಳನ್ನು ನೀಡಿದ್ದಾರೆ.
ಲಾಕ್ ಡೌನ್ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ಮೋದಿ, ರಾಜ್ಯ ಸರ್ಕಾರಗಳಿಂದ ಅಭಿಪ್ರಾಯ, ಸಲಹೆಗಳನ್ನು ಮೇ 15 ರೊಳಗೆ ಕಳಿಸುವಂತೆ ತಿಳಿಸಿದ್ದಾರೆ.
ಈ ಸಲಹೆಗಳನ್ನಾಧರಿಸಿ ಲಾಕ್ ಡೌನ್ ಮುಂದುವರೆಸುವ ಕುರಿತು ತೀರ್ಮಾನ ಪ್ರಕಟಿಸಲಾಗುವುದು. ಲಾಕ್ ಡೌನ್ ಸಂಪೂರ್ಣ ತೆರವು ಮಾಡದೇ ಕೆಲವು ವಿನಾಯಿತಿಗಳೊಂದಿಗೆ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗುವುದು.
ಮೇ 17 ರೊಳಗೆ ಕೇಂದ್ರದಿಂದ ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಮೇ 17 ರ ನಂತರ ಯಾವ ಚಟುವಟಿಕೆ ಆರಂಭಿಸಬೇಕು. ಯಾವ ಚಟುವಟಿಕೆ ನಿರ್ಬಂಧಿಸಬೇಕು ಎಂಬ ಕುರಿತಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗುವುದು. ಸಾರ್ವಜನಿಕ ಸಭೆ, ಸಮಾರಂಭ, ಶಾಲಾ –ಕಾಲೇಜು, ವಾರದ ಸಂತೆ ಸೇರಿ ಕೆಲವೊಂದು ಚಟುವಟಿಕೆಗೆ ನಿರ್ಬಂಧ ಹೇರಲಾಗುವುದು. ಈಗಾಗಲೇ ದೇಶದಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗಿದ್ದು, ಇದರೊಂದಿಗೆ ಮೇ 17 ರ ನಂತರ ಮತ್ತಷ್ಟು ವಾಣಿಜ್ಯ ಚಟುವಟಿಕೆಗಳಿಗೆ ವಿನಾಯಿತಿ ಸಿಗಲಿದೆ. ಕಂಟೇನ್ಮೆಂಟ್ ಜೋನ್ ಗಳಲ್ಲಿ ಕಠಿಣ ನಿರ್ಬಂಧ ಮುಂದುವರೆಯಲಿದೆ ಎಂದು ಹೇಳಲಾಗಿದೆ.