ನವದೆಹಲಿ: ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಮಹಾಮಾರಿ ಕೊರೊನಾ ಸೋಂಕು ತಡೆಯಲು ಭಾರತದಲ್ಲಿ ಔಷಧ ಸಿದ್ಧಪಡಿಸಲಾಗುತ್ತಿದ್ದು ಲಸಿಕೆ ಸೃಷ್ಟಿಗೆ ವೇಗ ನೀಡಲಾಗಿದೆ. ಅಕ್ಟೋಬರ್ ನಿಂದ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಹೇಳಲಾಗಿದೆ.
ವಿಶ್ವದಾದ್ಯಂತ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಭರದಿಂದ ಸಾಗಿವೆ. ಭಾರತದಲ್ಲಿ ಕೊರೋನಾಗೆ ಔಷಧ ಮತ್ತು ಲಸಿಕೆ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಸ್ವದೇಶಿ ನಿರ್ಮಿತ ಲಸಿಕೆ ಮತ್ತು ಔಷಧ ಲಭ್ಯವಾಗುವ ಆಶಾವಾದ ಕಾಣಿಸಿಕೊಂಡಿದೆ.
ದೇಶದಲ್ಲಿ ಪ್ರಮುಖವಾಗಿ ಕೊರೊನಾ ಸೋಂಕು ತಡೆಯಲು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಶೋಧಕರಲ್ಲಿ ಒಂದು ಸಂಶೋಧನಾ ಗುಂಪಿನ ಕ್ಲಿನಿಕಲ್ ಪ್ರಯೋಗ ಅಕ್ಟೋಬರ್ ವೇಳೆಗೆ ಮುಕ್ತಾಯವಾಗಲಿದ್ದು, ಮಾನವ ಪ್ರಯೋಗ ಆರಂಭವಾಗಲಿದೆ.
ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಈ ಕುರಿತು ಮಾಹಿತಿ ನೀಡಿದ್ದು, ಅಕ್ಟೋಬರ್ ಒಳಗೆ ಪ್ರಿಕ್ಲಿನಿಕಲ್ ಪ್ರಯೋಗ ಮುಕ್ತಾಯವಾಗಿ ಮಾನವ ಪ್ರಯೋಗ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.