ಕೊರೊನಾ ಹೆಚ್ಚಾಗುವುದಕ್ಕೆ ಕಾರಣವೇ ತಬ್ಲೀಘಿಗಳು ಎಂದು ಆರೋಪಿಸಲಾಗುತ್ತಿದೆ. ತಬ್ಲಿಘಿ ಜಮಾತ್ಗೆ ಹೋಗಿ ಬಂದ ಬಹುತೇಕರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಬೆನ್ನಲ್ಲೇ ಇಂತಹ ಆರೋಪಗಳು ಕೂಡ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸಿದವು. ಇದೀಗ ಮತ್ತೊಂದು ವಿಚಾರ ಕೂಡ ವಿವಾದಕ್ಕೆ ಗುರಿಯಾಗಿದೆ.
ಹೌದು, ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಆರತಿ ಲಾಲ್ಚಂದಾನಿ, ತಬ್ಲಿಘಿ ಜಮಾತ್ ಸದಸ್ಯರನ್ನು ಅವರು ಭಯೋತ್ಪಾದಕರು ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಸೋಂಕು ಅಂಟಿಸಿಕೊಂಡ ತಬ್ಲಿಘಿ ಜಮಾತ್ ಸಂಘಟನೆ ಸದಸ್ಯರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ ಎಂದಿದ್ದಾರೆ. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಮಾಡಿದೆ.
ಪತ್ರಕರ್ತರ ಬಳಿ ಈ ಪ್ರಾಂಶುಪಾಲೆ ಮಾತನಾಡಿದ್ದಾರೆ ಎನ್ನಲಾಗಿದೆ. ಹಾಗೂ ಇದನ್ನು ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ. ತಬ್ಲಿಘಿ ಜಮಾತ್ ಸದಸ್ಯರು ಭಯೋತ್ಪಾದಕರಿದ್ದಂತೆ. ಅವರಿಗೆ ಚಿಕಿತ್ಸೆ ನೀಡಲು ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಇದಕ್ಕಾಗಿ ತೆರಿಗೆದಾರರ ಕೋಟ್ಯಂತರ ಹಣ ವೇಸ್ಟ್ ಆಗುತ್ತಿದೆ. ಈ ರೀತಿ ಚಿಕಿತ್ಸೆ ಕೊಡುವ ಬದಲು ಇವರನ್ನೆಲ್ಲಾ ಕಾಡುಗಳಲ್ಲಿ ಬಿಡಬೇಕು ಅಥವಾ ಜೈಲುಗಳಿಗೆ ಹಾಕಬೇಕು ಎಂದು ಹೇಳಿದ್ದಾರೆ.
ಈ ಹೇಳಿಕೆ ವಿವಾದ ಸೃಷ್ಟಿ ಮಾಡುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಪ್ರಾಂಶುಪಾಲೆ, ತಾವು ಯಾವುದೇ ಸಮುದಾಯದ ವಿರುದ್ಧ ಹೇಳಿಕೆ ನೀಡಿಲ್ಲ. ಇದು ಹಳೆಯ ವಿಡಿಯೋ. ಕಳೆದ 70 ದಿನಗಳ ಹಿಂದೆ ಮಾಡಿದ್ದ ವಿಡಿಯೋ. ಇದನ್ನು ಚಿತ್ರೀಕರಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸೋದಾಗಿ ಹೇಳಿದ್ದಾರೆ.