ನವದೆಹಲಿ: ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದೇ ದಡಕ್ಕೆ ಬರುವಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಗೃಹ ಸಚಿವಾಲಯದ ವಿಪತ್ತು ನಿರ್ವಹಣೆ ವಿಭಾಗ ಹೇಳಿದ್ದು ಕೇರಳ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಲಕ್ಷದ್ವೀಪ ಸರ್ಕಾರಗಳಿಗೆ ಫ್ಯಾಕ್ಸ್ ಸಂದೇಶ ಕಳುಹಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಜೂನ್ 2 ರ ವೇಳೆಗೆ ಸುಮಾರು 90 -100 ಕಿಲೋಮೀಟರ್ ವೇಗದ ಗಾಳಿ ಬೀಸಬಹುದಾದ ಸಾಧ್ಯತೆ ಇದ್ದು ಸಮುದ್ರಕ್ಕೆ ಮೀನುಗಾರರು ಇಳಿಯಬಾರದು. ಮೀನುಗಾರಿಕೆಗೆ ತೆರಳಿದವರು ಇಂದೇ ದಡ ಸೇರಬೇಕು ಎಂದು ಹೇಳಲಾಗಿದೆ.
ಮೇ 31 ರ ಭಾನುವಾರ ಮತ್ತು ಜೂನ್ 1 ರ ಸೋಮವಾರ ಕರ್ನಾಟಕ, ಕೇರಳ, ಲಕ್ಷದ್ವೀಪ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಂತರದ ಎರಡು ದಿನದಲ್ಲಿ ಮಹಾರಾಷ್ಟ್ರ, ಬಳಿಕ ಗುಜರಾತ್ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.