ಜಲಂಧರ್: ಮನೆಗೇ ಕೇಕ್ ತರಿಸಿ, ಎಂಟು ವರ್ಷದ ಬಾಲಕನ ಹುಟ್ಟು ಹಬ್ಬವನ್ನು ಜಲಂಧರ್ ಪೊಲೀಸ್ ಕಮೀಷನರೇಟ್ ಆಚರಿಸಿದೆ.
ಪೊಲೀಸ್ ಕಮೀಷನರ್ ಗುರುಪ್ರೀತ್ ಸಿಂಗ್ ಬುಲ್ಲರ್, ಜಿಲ್ಲಾಧಿಕಾರಿ ವರೀಂದರ್ ಕುಮಾರ ಶರ್ಮಾ ನಗರದ ವಿವಿಧೆಡೆ ಪಥ ಸಂಚಲನ ನಡೆಸಿದ್ದರು. ಅದನ್ನು ಫೇಸ್ ಬುಕ್ ಲೈವ್ ಮಾಡಲಾಗುತ್ತಿತ್ತು.
ಆ ಸಂದರ್ಭದಲ್ಲಿ ಹರ್ಬಂದ್ ನಗರದ ಮನೀಶಾ ಗುರ್ಜಲ್ ಎಂಬ ಮಹಿಳೆ ಕಮೆಂಟ್ ಮಾಡಿ, ತಮ್ಮ 8 ವರ್ಷದ ಮಗ ಹರ್ಷಿಲ್ ಹುಟ್ಟು ಹಬ್ಬಕ್ಕೆ ಕೇಕ್ ಕಟ್ ಮಾಡದ ಕಾರಣ ಬೇಸರ ಮಾಡಿಕೊಂಡು ಅಳುತ್ತಿದ್ದಾನೆ ಎಂದು ತಿಳಿಸಿದ್ದರು. ತಕ್ಷಣ ಅವರಿಗೆ ಕರೆ ಮಾಡಿದ ಕಮೀಷನರ್ ಬುಲ್ಲರ್, ಬಾಲಕನ ಜತೆ ಫೋನ್ ನಲ್ಲಿ ಮಾತನಾಡಿ ಶುಭಾಶಯ ಕೋರಿದರು.
ಎಡಿಸಿಪಿ ಗುರ್ಮೀತ್ ಸಿಂಗ್ ಹಾಗೂ ಎಸಿಪಿ ಬರ್ಜಿಂದರ್ ಸಿಂಗ್ ಅವರು ಗುರ್ಜಲ್ ಮನೆಗೆ ಕೇಕ್ ಕೊಂಡೊಯ್ದಿದ್ದಾರೆ. ಅದನ್ನು ನೋಡಿ ಬಾಲಕ ಹಾಗೂ ಮನೆಯವರು ಅಚ್ಚರಿಗೊಂಡಿದ್ದಾರೆ. ಹ್ಯಾಪಿ ಬರ್ತ್ ಡೆ ಹಾಡಿ ಮನೆಯ ಎದುರೇ ಕೇಕ್ ಕಟ್ ಮಾಡಿ, ಬಾಲಕನಿಗೆ ಶುಭ ಕೋರಿದ ವಿಡಿಯೋವನ್ನು ಜಲಂಧರ್ ಕಮೀಷನರೇಟ್ ಅಪ್ಲೋಡ್ ಮಾಡಿದೆ.