ಹಸಿವು ಎಂಬ ಮೂರಕ್ಷರದ ಪದ ಮನುಷ್ಯನನ್ನು ಯಾವ ಹಂತಕ್ಕೆ ಬೇಕಾದರೂ ತಲುಪಿಸುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಪ್ರಸ್ತುತ ದೇಶಕ್ಕೆ ಕೊರೊನಾ ವಕ್ಕರಿಸಿರುವ ಸಂದರ್ಭದಲ್ಲಿ ಅನೇಕರು ನಿರುದ್ಯೋಗಿಗಳಾಗಿದ್ದು, ಈ ವೇಳೆ ಹಸಿವಿನಿಂದ ಕಂಗೆಟ್ಟ ಐದು ಮಂದಿ ಯುವಕರು ಮಾಡಿರುವ ಕಾರ್ಯ ಕಲ್ಲು ಹೃದಯದವರ ಮನವನ್ನೂ ಕಲಕುತ್ತದೆ.
ಗುಜರಾತಿನ ಜುನಾಗಢದಲ್ಲಿ ಈ ಘಟನೆ ನಡೆದಿದ್ದು, ಹಸಿವಿನಿಂದ ಬಳಲಿದ್ದ ಐವರು ಯುವಕರು ಟೆರೇಸ್ ಮೂಲಕ ರೆಸ್ಟೋರೆಂಟ್ ಒಂದಕ್ಕೆ ಪ್ರವೇಶಿಸಿದ್ದಾರೆ. ಮೊದಲಿಗೆ ತಿನ್ನಲು ಏನಾದರೂ ಸಿಗುತ್ತದಾ ಎಂದು ಅವರು ತಡಕಾಡಿದ್ದು, ಏನೂ ಇಲ್ಲದ ಕಾರಣ ಸ್ವತಃ ತಾವೇ ಅಡುಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಹೋಟೆಲಿನಲ್ಲಿದ್ದ ಆಹಾರ ಸಾಮಗ್ರಿಗಳನ್ನು ಬಳಸಿ ಅಡುಗೆ ಮಾಡಿಕೊಂಡ ಅವರು ಸಂತೃಪ್ತಿಯಾಗುವಷ್ಟು ಊಟ ಮಾಡಿ ಅಲ್ಲಿಂದ ತೆರಳಿದ್ದಾರೆ. ಹೋಟೆಲ್ ನ ಯಾವುದೇ ಬೆಲೆಬಾಳುವ ಸಾಮಾಗ್ರಿಗಳನ್ನು ಇವರು ಮುಟ್ಟಿಲ್ಲ. ಈ ದೃಶ್ಯಾವಳಿಗಳೆಲ್ಲ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಹೋಟೆಲ್ ಮಾಲೀಕ ಯಾವುದೇ ದೂರು ನೀಡದಿರಲು ನಿರ್ಧರಿಸಿದ್ದಾರೆ.