ಹಿಮಾಚಲಪ್ರದೇಶ: ಸರ್ಕಾರದ ಹಾಗೂ ರೈತರ ಜಗಳದಲ್ಲಿ ಗೆದ್ದಿದ್ದು ಮಾತ್ರ ಮಂಗಗಳು ಎಂಬ ಹೊಸ ಗಾದೆ ಶುರುವಾಗಿದೆ. ಹೌದು ಇಲ್ಲಿನ ರೈತರಿಗೆ ಮಂಗಗಳ ಕಾಟ ವಿಪರೀತವಾಗಿದ್ದು, ಬೆಳೆ ಹಾನಿ ಮಾಡುತ್ತಿವೆ. ಹೀಗಾಗಿ ಇದಕ್ಕೆ ತಡೆಯೊಡ್ಡಬೇಕೆಂದು ರೈತರು ಸರ್ಕಾರದ ಮೊರೆ ಹೋದರೆ, ಅವುಗಳನ್ನು ಬಂದೂಕಿನಿಂದ ಹೊಡೆದು ಸಾಯಿಸಿ ಎಂದು ಸರ್ಕಾರ ಹೇಳಿದೆ. ಹಾಗಾದರೆ ಮುಂದೇನಾಯ್ತು…?
ಸರ್ಕಾರವೇನೋ ಬೆಳೆನಾಶ ಮಾಡುವ ಮಂಗಗಳನ್ನು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ 1972 ಪ್ರಕಾರ, ಮಂಗಗಳಿಂದ ಮನುಷ್ಯನಿಗೆ ಇಲ್ಲವೇ ಆಸ್ತಿಗಳಿಗೆ ಅಪಾಯವಿದ್ದರೆ ಅವುಗಳನ್ನು ಕೊಲ್ಲಬಹುದು ಎಂದು ಆದೇಶ ಹೊರಡಿಸಿದೆ. ಆದರೆ, ಮಂಗಗಳು ಹನುಮಂತನ ಅವತಾರ, ದೇವರು ಎಂಬುದು ಇಲ್ಲಿನವರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಲ್ಲುವುದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ.
ರಜಪೂತರು ಇರುವ ಪ್ರದೇಶಗಳಲ್ಲಿ ಅವರು ಮಂಗಗಳನ್ನು ಕೊಲ್ಲುತ್ತಿದ್ದಾರೆ. ಆದರೆ, ನಾವು ಬ್ರಾಹ್ಮಣರು ಯಾವುದೇ ಕಾರಣಕ್ಕೂ ಮಂಗಗಳನ್ನು ಕೊಲ್ಲಲು ಆಗದು ಎಂಬುದು ಮತ್ತೊಂದು ಗ್ರಾಮದವರ ವಾದವಾಗಿದೆ. ಸದ್ಯ ಸಿರ್ಮೌರ್, ಮಂಡಿ ಮತ್ತು ಸೋಲನ್ ಜಿಲ್ಲೆಗಳಲ್ಲಿ ಮಂಗಗಳ ಹಾವಳಿ ಬಹಳ ಇದೆ.