ಕೊರೊನಾ ಸೊಂಕಿಗೆ ಒಳಗಾಗಿದ್ದ ದೆಹಲಿಯ ವೈದ್ಯರೊಬ್ಬರು ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕೊರೊನಾ ವೈರಸ್ ಆರಂಭವಾದಾಗಿನಿಂದ ಈ ವೈದ್ಯ ಮನೆ ಮಠ ಎನ್ನದೇ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು.
ಆದರೆ ದೆಹಲಿಯಲ್ಲಿ ಯಾವುದೇ ಕಡೆ ಅವರಿಗೆ ಆಸ್ಪತ್ರೆ ಬೆಡ್ ವ್ಯವಸ್ಥೆ ಆಗಿರಲಿಲ್ಲ. ಹೀಗಾಗಿ ಬಿಜಲ್ವಾನ್ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಮಾಜಿ ಐಎಎಸ್ ಅಧಿಕಾರಿ ಹರ್ಷ್ ಮಂದರ್ ಹೇಳಿದ್ದಾರೆ.
ಡಾ. ಬಿಜಲ್ವಾನ್ ಕಳೆದ ವರ್ಷ ಕೊರೊನಾ ವೈರಸ್ ಶುರುವಾದ ಬಳಿಕ ಸಪ್ಟೆಂಬರ್ ತಿಂಗಳಲ್ಲಿ ಬೀದಿಗಳಲ್ಲಿ ಔಷಧಿ ಎಂಬ ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡಿದ್ದರು. ಮೀನಾ ಬಜಾರ್ನಂತಹ ಏರಿಯಾಗಳಲ್ಲಿ ಸಣ್ಣ ಕೋವಿಡ್ ಕ್ಲಿನಿಕ್ಗಳನ್ನ ತೆರೆದಿದ್ದರು. ಕೇವಲ ಕೋವಿಡ್ ಮಾತ್ರವಲ್ಲದೇ ಕಳೆದ ಅನೇಕ ವರ್ಷಗಳಿಂದ ಅವರು ಕ್ಷಯ ರೋಗಕ್ಕೆ ಒಳಗಾಗುತ್ತಿದ್ದ ನಿರಾಶ್ರಿತರಿಗೆ ಚಿಕಿತ್ಸೆ ನೀಡುತ್ತಿದ್ದರು.
ತಮಗೆ ಕೋವಿಡ್ ಇದೆ ಎಂಬುದು ತಿಳಿಯುತ್ತಿದ್ದಂತೆಯೇ ಬಿಜಲ್ವಾನ್ ಆಸ್ಪತ್ರೆಗಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವ ಆಸ್ಪತ್ರೆಗಳಲ್ಲಿಯೂ ಅವರಿಗೆ ಬೆಡ್ ಸಿಗಲೇ ಇಲ್ಲ. ಕೊನೆಗೆ ಅವರು ಮನೆಯಲ್ಲಿ ಸ್ವಯಂ ಚಿಕಿತ್ಸೆ ಆರಂಭಿಸಿದ್ದರು. ಆದರೆ ಆಮ್ಲಜನಕದ ಕೊರತೆಯಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಹರ್ಷ ಹೇಳಿದ್ದಾರೆ.