ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿರುವ ಎರಡನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳಲು ಎರಡು ದಿನ ಬಾಕಿಯಿದೆ. ಮುಂದೇನು ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕಿದೆ. ಈ ಮಧ್ಯೆ ಹಸಿರು ವಲಯದ ನಿಯಮವನ್ನು ಬದಲಾಯಿಸಲಾಗಿದೆ. ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಈ ಹಿಂದೆ 28 ದಿನಗಳ ಕಾಲ ಯಾವುದೇ ಕೊರೊನಾ ಪ್ರಕರಣ ಕಂಡುಬರದೆ ಹೋದಲ್ಲಿ ಅದನ್ನು ಹಸಿರು ವಲಯವೆಂದು ಘೋಷಣೆ ಮಾಡಲಾಗ್ತಿತ್ತು. ಆದ್ರೀಗ ಆ ಅವಧಿಯನ್ನು 21 ದಿನಕ್ಕೆ ಇಳಿಸಲಾಗಿದೆ. 21 ದಿನಗಳ ಕಾಲ ಯಾವುದೇ ಹೊಸ ಕೊರೊನಾ ಪ್ರಕರಣ ದಾಖಲಾಗದೆ ಹೋದಲ್ಲಿ ಅದನ್ನು ಹಸಿರು ವಲಯವಾಗಿ ಘೋಷಣೆ ಮಾಡಲಾಗ್ತಿದೆ.
ಆರೋಗ್ಯ ಸಚಿವಾಲಯವು ದೇಶದ 319 ಜಿಲ್ಲೆಗಳನ್ನು ಹಸಿರು ವಲಯವೆಂದು ಘೋಷಿಸಿದೆ. 134 ಜಿಲ್ಲೆಗಳನ್ನು ಕೆಂಪು ವಲಯ ಮತ್ತು 284 ಜಿಲ್ಲೆ ಕಿತ್ತಳೆ ವಲಯವೆಂದು ಘೋಷಿಸಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಬೆಂಗಳೂರು ಮತ್ತು ಅಹಮದಾಬಾದ್ ಸೇರಿದಂತೆ ಎಲ್ಲಾ ಮೆಟ್ರೋ ನಗರಗಳನ್ನು ಕೆಂಪು ವಲಯವೆಂದು ಘೋಷಿಸಲಾಗಿದೆ.