ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವಿದೇಶಿ ಬಂಡವಾಳ ಆಕರ್ಷಿಸುವ ಕುರಿತಾಗಿ ಮಹತ್ವದ ಮಾತುಕತೆ ನಡೆದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಖಾತೆ ಸಚಿವ ಹರ್ಷವರ್ಧನ್ ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಳಿತಪ್ಪಿದ ದೇಶದ ಆರ್ಥಿಕತೆಗೆ ಬೂಸ್ಟ್ ಕೊಡಲು ಪ್ರಧಾನಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ಆರ್ಥಿಕತೆ ಮೇಲೆತ್ತಲು ಪ್ಲಾನ್ ಮಾಡಿರುವ ಅವರು ಪ್ರಧಾನಿ ಕಚೇರಿಯಲ್ಲಿ ಕೇಂದ್ರ ಸಚಿವರು, ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿದೇಶಿ ಹೂಡಿಕೆ ಆಕರ್ಷಿಸಲು, ಸ್ಥಳೀಯ ಹೂಡಿಕೆ ಉತ್ತೇಜಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ್ದರಿಂದ ವಾಣಿಜ್ಯ ಚಟುವಟಿಕೆ, ವ್ಯವಹಾರಗಳೆಲ್ಲ ಸ್ಥಗಿತಗೊಂಡು ಆದಾಯ ಕುಸಿತವಾಗಿ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಈಗಾಗಲೇ ಲಾಕ್ ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ. ಲಾಕ್ ಡೌನ್ ಬಳಿಕ ಮುಂದಿನ ನಡೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ವಿಶ್ವದಲ್ಲೇ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ವಿದೇಶಿ ಕಂಪನಿಗಳು ಹೂಡಿಕೆಗೆ ಸುರಕ್ಷಿತ ತಾಣಗಳನ್ನು ಹುಡುಕುತ್ತಿದ್ದು, ಅಂತಹ ಕಂಪನಿಗಳನ್ನು ಆಕರ್ಷಿಸಲು ಮೋದಿ ಟೀಂ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.