ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿರುವುದು ಗೊತ್ತೇ ಇದೆ. ಅನೇಕ ಮಂದಿ ತಮ್ಮ ತಮ್ಮ ಊರುಗಳನ್ನು ಸೇರಲು ಕಾಲ್ನಡಿಗೆಯಲ್ಲೇ ಹೋಗಿದ್ದರು. ಅಷ್ಟೆ ಅಲ್ಲ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಆದರೆ ಇದೀಗ ಆಯಾಯ ಸರ್ಕಾರಗಳು ಟ್ರೈನ್ ವ್ಯವಸ್ಥೆ ಮಾಡಿರುವುದರಿಂದ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರುತ್ತಿದ್ದಾರೆ. ವಿಪರ್ಯಾಸ ಅಂದರೆ ಇಂದಿಗೂ ಅವರಿಗೆ ಆಹಾರದ ಸಮಸ್ಯೆ ನಿಂತಿಲ್ಲ.
ಇದೆಲ್ಲದರ ನಡುವೆ ಮತ್ತೊಂದು ವಿಚಾರ ಭಾರೀ ಸುದ್ದಿಯಾಗುತ್ತಿದೆ. ಅತ್ತ ಊಟವಿಲ್ಲದೆ ಅನೇಕ ವಲಸೆ ಕಾರ್ಮಿಕರು ಸತ್ತರೆ, ಇಲ್ಲೊಬ್ಬ ವಲಸೆ ಕಾರ್ಮಿಕ ಹತ್ತು ಮಂದಿ ಊಟ ಮಾಡುವಷ್ಟು ಒಬ್ಬನೇ ತಿನ್ನುತ್ತಾನಂತೆ. ಈತನಿಗೆ ಪ್ರತಿ ದಿನ ಬೆಳಗಿನ ಉಪಾಹಾರಕ್ಕೆ 40 ರೋಟಿ ಮತ್ತು ಮಧ್ಯಾಹ್ನ ಬರೋಬ್ಬರಿ 10 ಪ್ಲೇಟ್ ಅನ್ನ ಬೇಕಂತೆ.
ಹೌದು, ರಾಜಸ್ಥಾನದಿಂದ ಮರು ವಲಸೆ ಬಂದು ಬಿಹಾರದ ಬಕ್ಸರ್ನ ಮಂಝ್ವಾರಿ ಕ್ವಾರಂಟೇನ್ ಕೇಂದ್ರದಲ್ಲಿರುವ 23 ವರ್ಷದ ಅನುಪ್ ಓಝಾ ಎಂಬ ವಲಸೆ ಕಾರ್ಮಿಕನಿಗೆ ಪ್ರತಿನಿತ್ಯ 10 ಮಂದಿ ತಿನ್ನುವಷ್ಟು ಆಹಾರ ಬೇಕಂತೆ. ಈತನಿಗೆ ಪ್ರತಿನಿತ್ಯ ಆಹಾರ ಪೂರೈಸುವವರು ಬಸವಳಿದಿದ್ದಾರೆ ಎನ್ನಲಾಗಿದೆ. 10 ದಿನಗಳ ಹಿಂದೆ ಅನುಪ್ ಓಝಾ ಕ್ವಾರಂಟೈನ್ ಕೇಂದ್ರದಲ್ಲಿದ್ದಾರಂತೆ.