ಫುಟ್ಪಾತ್ ಮೇಲೆ ಚಪ್ಪಲಿ, ಬಟ್ಟೆ ಇಡುತ್ತಿದ್ದಾರೆ ಜನ…! ಬೆರಗಾಗಿಸುತ್ತೆ ಇದರ ಹಿಂದಿನ ಕಾರಣ 18-05-2020 8:40AM IST / No Comments / Posted In: Corona, Latest News, India ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಇದು ಕೂಲಿ ಕಾರ್ಮಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದು, ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವೂ ಖರ್ಚಾಗಿದ್ದು, ಒಪ್ಪೊತ್ತಿನ ಊಟಕ್ಕೂ ಕಷ್ಟವಾಗಿದೆ. ಹೀಗಾಗಿ ಸ್ವಂತ ಊರಿಗೆ ತೆರಳುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಈ ವಲಸೆ ಕಾರ್ಮಿಕರು ಬಂದಿದ್ದಾರೆ. ಆದರೆ ಲಾಕ್ ಡೌನ್ ಕಾರಣಕ್ಕೆ ಬಸ್ ಹಾಗೂ ರೈಲು ಸಂಚಾರವಿಲ್ಲದ ಕಾರಣ ಊರಿಗೆ ತೆರಳಲು ಕಾಲ್ನಡಿಗೆಯನ್ನೇ ಆಶ್ರಯಿಸಿದ್ದಾರೆ. ಹೀಗೆ ತೆರಳುವ ಸಂದರ್ಭದಲ್ಲಿ ಅನೇಕರು ದುರಂತ ಸಾವನ್ನಪ್ಪಿದ್ದು, ಉಳಿದವರು ಉರಿ ಬಿಸಿಲು, ಮಳೆಯನ್ನು ಲೆಕ್ಕಿಸದೆ ಕುಟುಂಬ ಸಮೇತ ತಮ್ಮ ಊರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಹೀಗೆ ತೆರಳುತ್ತಿರುವವರ ನೆರವಿಗೆ ಸಾರ್ವಜನಿಕರು, ಸಂಘ – ಸಂಸ್ಥೆಗಳು ಧಾವಿಸಿದ್ದು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದರ ಮಧ್ಯೆ ಭೂಪಾಲ್ ನಗರದ ಜನತೆ ಕಾರ್ಯ ಬೆರಗಾಗಿಸುವುದರ ಜೊತೆಗೆ ಮೆಚ್ಚುಗೆಗೂ ಪಾತ್ರವಾಗಿದೆ. ಇಲ್ಲಿನ ಜನತೆ ಫುಟ್ಪಾತ್ ಮೇಲೆ ಚಪ್ಪಲಿ, ಶೂ ಹಾಗೂ ಬಟ್ಟೆಗಳನ್ನು ಇಡುತ್ತಿದ್ದು, ಕಾಲ್ನಡಿಗೆಯಲ್ಲಿ ಸಾಗುತ್ತಿರುವ ವಲಸೆ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ಕಾರ್ಮಿಕರು ತಮಗೆ ಅವಶ್ಯಕವಾಗಿರುವ ವಸ್ತುಗಳನ್ನು ಆರಿಸಿಕೊಳ್ಳಬೇಕೆಂಬ ಉದ್ದೇಶ ಅಲ್ಲಿನ ಜನತೆಯದ್ದಾಗಿದೆ. ಜೊತೆಗೆ ಕೆಲವರು ತಂಡಗಳನ್ನಾಗಿ ಮಾಡಿಕೊಂಡು ಹೈವೇಯಲ್ಲಿ ನಿಂತು ನಡೆದು ಸಾಗುತ್ತಿರುವ ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.