ವಾಣಿಜ್ಯ ನಗರಿ ಮುಂಬೈ ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿಹೋಗಿದೆ. ದೇಶದಲ್ಲೇ ಮಹಾರಾಷ್ಟ್ರ ಅತ್ಯಧಿಕ ಕೊರೊನಾ ಸೋಂಕು ಪ್ರಕರಣಗಳನ್ನು ಹೊಂದಿದ್ದು, ಈ ಮಹಾಮಾರಿಗೆ ಈವರೆಗೆ ಎರಡು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಅದರಲ್ಲೂ ಏಷ್ಯಾದ ಅತಿದೊಡ್ಡ ಕೊಳಗೇರಿ ಎಂದೇ ಕುಖ್ಯಾತಿ ಪಡೆದಿರುವ ಧಾರಾವಿ ಪ್ರದೇಶದಲ್ಲಿ ವ್ಯಾಪಿಸುತ್ತಿರುವ ಸೋಂಕು ಆತಂಕಕ್ಕೆ ಕಾರಣವಾಗಿದೆ. ಇದರ ಮಧ್ಯೆ ಮುಂಬೈ ನಗರಕ್ಕೆ ಮತ್ತೊಂದು ಕಂಟಕ ಎದುರಾಗಿದ್ದು, ಭೀತಿ ಎದುರಾಗಿದೆ.
129 ವರ್ಷಗಳ ಬಳಿಕ ಮುಂಬೈನಲ್ಲಿ ಚಂಡಮಾರುತ ಕಾಣಿಸಿಕೊಳ್ಳುತ್ತಿದ್ದು, ಈ ‘ನಿಸರ್ಗ’ ಚಂಡಮಾರುತ ಅತ್ಯಂತ ಪ್ರಬಲವಾಗಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. 1891 ರಿಂದ ಈವರೆಗೆ ಮಹಾರಾಷ್ಟ್ರದಲ್ಲಿ ಚಂಡಮಾರುತ ಅಪ್ಪಳಿಸಿರಲಿಲ್ಲವೆಂದು ಹೇಳಲಾಗಿದ್ದು, ಕೊರೊನಾ ಸಂಕಷ್ಟದ ಜೊತೆಗೆ ಈಗ ಎದುರಾಗಿರುವ ಮತ್ತೊಂದು ವಿಪತ್ತು ಆತಂಕ ತಂದೊಡ್ಡಿದೆ.