ನವದೆಹಲಿ: ಅಂಫಾನ್ ಚಂಡಮಾರುತ ಅಬ್ಬರಕ್ಕೆ 100 ಕ್ಕೂ ಹೆಚ್ಚು ಬೋಟ್ ಛಿದ್ರವಾದ ಘಟನೆ ತಮಿಳುನಾಡಿನ ರಾಮೇಶ್ವರಂ ಸಮುದ್ರ ತೀರದಲ್ಲಿ ನಡೆದಿದೆ.
ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಬೋಟ್ ಗಳು ಕೊಚ್ಚಿಕೊಂಡು ಹೋಗಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಬಿರುಗಾಳಿ ಹೊಡೆತಕ್ಕೆ ಛಿದ್ರವಾದ ಬೋಟ್ ಕೊಚ್ಚಿ ಹೋಗಿವೆ.
ತಮಿಳುನಾಡಿನ ಕರಾವಳಿ ತೀರಗಳಾದ ಪಂಬನ್, ರಾಮೇಶ್ವರಂ ತಂಗಚಿಮಡಂನಲ್ಲಿ ಭಾರಿ ಗಾಳಿಮಳೆಯಾಗಿ ಲಂಗರು ಹಾಕಿದ್ದ 100 ದೋಣಿಗಳು ಹಾನಿಗೀಡಾಗಿದೆ ಎಂದು ಮೀನುಗಾರಿಕೆ ಅಧಿಕಾರಿಗಳು ಹೇಳಿದ್ದಾರೆ.
ವಾರ್ಷಿಕ ಮೀನು ಉತ್ಪಾದನಾ ಸಮಯದ ಕಾರಣದಿಂದ ಮೀನುಗಾರಿಕೆ ನಿಷೇಧದ ಅವಧಿ ಚಾಲ್ತಿಯಲ್ಲಿದೆ. ಇನ್ನು ಲಾಕ್ಡೌನ್ ಪರಿಣಾಮ ಮೀನುಗಾರರು ಮನೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚಂಡಮಾರುತದಿಂದ ಭಾರಿ ಹಾನಿ ಉಂಟಾಗಿದ್ದು, ದೋಣಿ ದುರಸ್ತಿಗೆ ಪರಿಹಾರ ನೀಡಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಪತಿವಾಡ ಬರ್ರಿವಾಡ ಗ್ರಾಮದ ಬಳಿ ಓರ್ವ ಮೀನುಗಾರ ಮೃತಪಟ್ಟಿದ್ದಾರೆ. ಅಂಫಾನ್ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮಗುಚಿ ಮೀನುಗಾರ ಸಾವನ್ನಪ್ಪಿದ್ದಾರೆ.