ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ಆರ್ಥಿಕತೆಗೆ ಪೆಟ್ಟು ಬಿದ್ದಿರುವ ಕಾರಣ ಕೇಂದ್ರ ಸರ್ಕಾರ ಕೆಲವೊಂದು ವಿನಾಯಿತಿಗಳನ್ನು ನೀಡಿದೆ.
ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಹಾಗೂ ಕೆಲವೊಂದು ಕೈಗಾರಿಕೆಗಳ ಆರಂಭಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹೀಗಾಗಿ ಸರಕು ಸಾಗಣೆ ವಾಹನಗಳ ಅಂತಾರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಆದರೆ ಕೆಲವೊಂದು ರಾಜ್ಯಗಳ ಗಡಿ ಪ್ರದೇಶದಲ್ಲಿ ಸರಕು ಸಾಗಣೆ ವಾಹನಗಳಿಗೆ ತಡೆ ಹಾಕುತ್ತಿರುವುದರಿಂದ ಕೇಂದ್ರ ಗೃಹ ಸಚಿವಾಲಯ ಈಗ ಮಹತ್ವದ ಹೇಳಿಕೆಯೊಂದನ್ನು ನೀಡಿದೆ.
ಸರಕು ಸಾಗಣೆ ವಾಹನಗಳ ಅಂತಾರಾಜ್ಯ ಸಂಚಾರಕ್ಕೆ ಪ್ರತ್ಯೇಕ ಪಾಸ್ ಅಗತ್ಯವಿರುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದ್ದು, ಈ ವಾಹನಗಳ ಚಾಲಕರ ವಾಹನ ಚಾಲನಾ ಪರವಾನಗಿಯನ್ನೇ ಪಾಸ್ ಆಗಿ ಪರಿಗಣಿಸಬೇಕು ಎಂದು ತಿಳಿಸಿದೆ.
ಈ ವಾಹನಗಳಲ್ಲಿ ಇಬ್ಬರು ಚಾಲಕರು ಮತ್ತು ಒಬ್ಬ ಸಹಾಯಕನ ಪ್ರಯಾಣಕ್ಕೆ ಮಾತ್ರ ಅವಕಾಶವಿದ್ದು, ಸರಕು ವಿಲೇವಾರಿ ಮಾಡಿದ ಬಳಿಕ ವಾಪಾಸಾಗುವ ಖಾಲಿ ವಾಹನಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಹೇಳಿದೆ.