ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಆರ್ಭಟ ಮುಂದುವರೆಸಿದೆ. ಕೊರೊನೊ ಸೋಂಕಿನಿಂದಾಗಿ ಸಾವಿನ ಸರಣಿ ಸಂಭವಿಸುತ್ತಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಮೂರು ಬಾರಿ ಲಾಕ್ ಡೌನ್ ಜಾರಿಗೊಳಿಸಿದೆ.
ಮೂರನೇ ಹಂತದ ಲಾಕ್ ಡೌನ್ ಮೇ 17ರಂದು ಅಂತ್ಯಗೊಳ್ಳಲಿದ್ದು, ಮುಂದುವರೆಸಬೇಕಾ…? ಬೇಡವೇ…? ಎಂಬ ಚರ್ಚೆ ನಡೆದಿದೆ. ಇದರ ಮಧ್ಯೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು, ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಮುಂದುವರಿಸಬೇಕು ಎಂಬ ಒತ್ತಡವನ್ನು ಕೇಂದ್ರ ಸರ್ಕಾರದ ಮೇಲೆ ಹೇರುತ್ತಿದ್ದಾರೆ.
ಆದರೆ ಈಗಾಗಲೇ ಜಾರಿಗೊಂಡಿರುವ ಲಾಕ್ ಡೌನ್ ನಿಂದಾಗಿ ಜನತೆ ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಒಂದೊಮ್ಮೆ ಮೇ 17ರ ಬಳಿಕ ಲಾಕ್ ಡೌನ್ ಮುಂದುವರೆಸದಿರಲು ತೀರ್ಮಾನಿಸಿದರೂ ಜನಜೀವನ ಸಹಜ ಸ್ಥಿತಿಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ತಹಬಂದಿಗೆ ಬರಲು ವರ್ಷಾನುಗಟ್ಟಲೆ ಹಿಡಿಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಯಾಕೆಂದರೆ ಲಾಕ್ ಡೌನ್ ತೆರವುಗೊಂಡರೂ ಕೊರೊನಾ ಮಹಾಮಾರಿಗೆ ಲಸಿಕೆ ಕಂಡು ಹಿಡಿಯುವವರೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಇದರಿಂದಾಗಿ ಜನತೆ ಮನೆಯಿಂದ ಹೊರಬೀಳಲು ಸಹಜವಾಗಿಯೇ ಹಿಂಜರಿಯುತ್ತಾರೆ. ಇದು ವ್ಯಾಪಾರ ವಹಿವಾಟುಗಳ ಮೇಲೆ ಪರಿಣಾಮ ಬೀಳುವುದು ನಿಶ್ಚಿತ.
ಅದರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುವ ಸಿನಿಮಾ ಹಾಲ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಮೊದಲಾದವುಗಳನ್ನು ಸದ್ಯಕ್ಕೆ ತೆರೆಯುವುದು ಡೌಟ್ ಎನ್ನಲಾಗಿದೆ. ಈ ಕ್ರಮಗಳು ಆರ್ಥಿಕ ಪರಿಸ್ಥಿತಿ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ಕೊರೊನಾ ಲಾಕ್ ಡೌನ್ ನಂತರದ ಬದುಕು ಈ ಮೊದಲಿನಂತೆ ಇರುವುದಿಲ್ಲ ಎಂಬುದು ಖಚಿತ.