ಕೊರೊನಾ ಕಾರಣಕ್ಕೆ ದೇಶದಲ್ಲಿ 50 ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಮಾರ್ಚ್ 23ರ ನಂತ್ರ ಯಾವುದೇ ಪ್ರಯಾಣಿಕ ರೈಲುಗಳು ಓಡಾಟ ನಡೆಸಿರಲಿಲ್ಲ. ನಾಳೆಯಿಂದ ದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ 15 ಜೋಡಿ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಐಆರ್ಸಿಟಿಸಿಯ ಅಧಿಕೃತ ವೆಬ್ಸೈಟ್ನಲ್ಲಿ ಇಂದು ಸಂಜೆ 4 ಗಂಟೆಯಿಂದ ಟಿಕೆಟ್ ಕಾಯ್ದಿರಿಸುವಿಕೆ ಪ್ರಾರಂಭವಾಗಲಿದೆ. ಈ ರೈಲುಗಳ ಚಾಲನೆ ಮತ್ತು ಪ್ರಯಾಣಿಕರ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಸದ್ಯ ತೆರೆಯುವುದಿಲ್ಲ ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಸಹ ನೀಡಲಾಗುವುದಿಲ್ಲ. ಸೋಮವಾರ ಸಂಜೆ 4 ಗಂಟೆಯಿಂದ ಐಆರ್ಸಿಟಿಸಿಯಿಂದ ಟಿಕೆಟ್ ಕಾಯ್ದಿರಿಸಬಹುದು. ಆನ್ಲೈನ್ ನಲ್ಲಿ ಮಾತ್ರ ಟಿಕೆಟ್ ಕಾಯ್ದಿರಿಸುವಿಕೆ ನಡೆಯಲಿದೆ. ಮಂಗಳವಾರದಿಂದ ರೈಲ್ವೆ ಓಡಿಸಲು ನಿರ್ಧರಿಸಿದ ರೈಲುಗಳೆಲ್ಲವೂ ರಾಜಧಾನಿ ರೈಲುಗಳಾಗಿವೆ. ಎಲ್ಲಾ ರೈಲುಗಳಲ್ಲಿ ಮಧ್ಯದ ಬೆರ್ತ್ ಕಾಯ್ದಿರಿಸಲಾಗುವುದಿಲ್ಲ. ರೈಲು ವೇಳಾಪಟ್ಟಿ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ನೀಡಲಾಗುವುದು ಎಂದು ರೈಲ್ವೆ ಮಾಹಿತಿ ನೀಡಿದೆ.
ಗೃಹ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ದೃಢಪಡಿಸಿದ ಇ-ಟಿಕೆಟ್ ಹೊಂದಿರುವ ಜನರು ಮಾತ್ರ ಈ ರೈಲುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.
ಆರೋಗ್ಯ ತಪಾಸಣೆ ಮತ್ತು ಪ್ಲಾಟ್ಫಾರ್ಮ್ನ ಸ್ಕ್ರೀನಿಂಗ್ ನಲ್ಲಿ ಹಾದುಹೋಗುವ ಪ್ರಯಾಣಿಕರಿಗೆ ಮಾತ್ರ ಈ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ಸಿಗುತ್ತದೆ. ಯಾವುದೇ ವ್ಯಕ್ತಿಗೆ ಕೊರೊನಾದ ಯಾವುದೇ ಸೌಮ್ಯ ಲಕ್ಷಣಗಳು ಕಂಡುಬಂದರೆ ರೈಲು ಹತ್ತಲು ಅವಕಾಶವಿರುವುದಿಲ್ಲ.
ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸ್ಯಾನಿಟೈಜರ್ ಬಳಸಬೇಕಾಗುತ್ತದೆ. ಕಸ ತುಂಬಲು ಚೀಲ ತೆಗೆದುಕೊಂಡು ಹೋಗಬೇಕು.
ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಯಾಣಿಕರು ಬೋರ್ಡಿಂಗ್, ಲ್ಯಾಂಡಿಂಗ್ ಮತ್ತು ಪ್ರಯಾಣದುದ್ದಕ್ಕೂ ಆರೋಗ್ಯ ಸಚಿವಾಲಯ ಹೊರಡಿಸಿದ ನೈರ್ಮಲ್ಯ ನಿಯಮಗಳನ್ನು ಪಾಲಿಸುವುದು ಅವಶ್ಯಕ.
ರೈಲಿನ ಸಮಯಕ್ಕಿಂತ 2 ಗಂಟೆಗಳ ಮೊದಲು ಪ್ರಯಾಣಿಕರು ನಿಲ್ದಾಣವನ್ನು ತಲುಪಬೇಕು. ಎಲ್ಲಾ ರೈಲುಗಳು ಸೀಮಿತ ನಿಲ್ದಾಣಗಳೊಂದಿಗೆ ಮಾತ್ರ ಚಲಿಸುತ್ತವೆ.