ವಲಸೆ ಕಾರ್ಮಿಕರ ಕಷ್ಟ ಕಾರ್ಪಣ್ಯಗಳು ಗುಂಡಿಗೆ ಗಟ್ಟಿಯಾಗಿರುವವರನ್ನೂ ಕಣ್ಣೀರಾಗಿಸುತ್ತಿವೆ. ಪುಟ್ಟ ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಮೇತವಾಗಿ ಈ ಕಾರ್ಮಿಕರುಗಳು ನೂರಾರು ಕಿ.ಮೀ. ದೂರವನ್ನು ನಡೆದೇ ಸಾಗುತ್ತಿದ್ದಾರೆ. ಕೊರೊನಾ ಎಂಬ ಮಹಾಮಾರಿ ಬಡವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ.
ಹೀಗೆ ಕಷ್ಟದಲ್ಲಿರುವವರ ಸಹಾಯಕ್ಕೆ ದೇಶದ ಎಲ್ಲೆಡೆಯೂ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸರ್ಕಾರಗಳ ಜೊತೆಗೆ ಸಾರ್ವಜನಿಕರು, ಸಂಘ – ಸಂಸ್ಥೆಗಳು ಇವರುಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಜೊತೆಗೆ ಅಗತ್ಯ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಾ ಸಹಾಯ ಹಸ್ತ ಚಾಚಿದ್ದಾರೆ.
ಇದರ ಮಧ್ಯೆ ಇಲ್ಲೊಂದು ವಿಡಿಯೋ ಎಲ್ಲರ ಕಣ್ಣು ತೆರೆಸುವಂತಿದೆಯಲ್ಲದೆ ಹಸಿವು ಮನುಷ್ಯನನ್ನು ಹೇಗೆ ತೀವ್ರವಾಗಿ ಕಾಡುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಹಸಿವಿನಿಂದ ಕಂಗೆಟ್ಟಿದ್ದ ಬಡ ವ್ಯಕ್ತಿಯೊಬ್ಬ ರಸ್ತೆಯಂಚಿನಲ್ಲಿ ಕುಳಿತು ಯಾರೂ ಗಮನಿಸಬಾರದೆಂಬ ಕಾರಣಕ್ಕೆ ಕೈಯಲ್ಲಿ ಮುಚ್ಚಿಟ್ಟುಕೊಂಡು ಎಲೆಗಳನ್ನು ತಿನ್ನುತ್ತಿರುತ್ತಾನೆ. ಇದು ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಗಮನಕ್ಕೆ ಬಂದಿದೆ.
ತಾಯಿ ಹೃದಯದ ಈ ಮಹಿಳೆ ಆತನ ಬಳಿ ಹೋಗಿ ಎಲೆಗಳನ್ನು ಏಕೆ ತಿನ್ನುತ್ತಿರುವೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗಲಿಬಿಲಿಗೊಳಗಾದ ಆತ ಮೊದಲಿಗೆ ನಿರಾಕರಿಸಿದ್ದು, ಆಗ ಮಹಿಳೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿನಗಾಗಿ ಆಹಾರ ತಂದು ಕೊಡುತ್ತೇನೆ ಎಂದು ಹೇಳಿದ್ದಾರೆ.
ಸ್ವಲ್ಪ ಹೊತ್ತಿನಲ್ಲೇ ಆ ಮಹಿಳೆ ಹೇಳಿದಂತೆ ಬಡ ವ್ಯಕ್ತಿಗೆ ಆಹಾರ ತಂದುಕೊಟ್ಟಿದ್ದು ಆತ ಸೇವಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಕಣ್ಣಾಲಿಗಳು ತುಂಬಿ ಬಂದಿದ್ದು, ಈ ದೃಶ್ಯವನ್ನು ಕಂಡ ಮಹಿಳೆ ಕೂಡಾ ಭಾವುಕರಾಗಿದ್ದಾರೆ.