ಸಂಸದ ತೇಜಸ್ವಿ ಸೂರ್ಯ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇವರು ಮಾಡುವ ಕೆಲ ಟ್ವೀಟ್ ವಿವಾದಕ್ಕೂ ಕಾರಣವಾಗುತ್ತಿರುತ್ತವೆ. ಇದೀಗ ಇವರ ಟ್ವೀಟ್ ಒಂದನ್ನು ಅಳಿಸಿ ಹಾಕುವಂತೆ ಕೇಂದ್ರವೇ ಟ್ವಿಟ್ಟರ್ ಸಂಸ್ಥೆಗೆ ಸೂಚನೆ ನೀಡಿದೆ.
ಹೌದು, 2015 ರಲ್ಲಿ ತೇಜಸ್ವಿ ಸೂರ್ಯ ಪೋಸ್ಟ್ ಒಂದನ್ನು ಹಾಕಿದ್ದರು. ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ, ಭಯೋತ್ಪಾದಕರಿಗೆ ಧರ್ಮ ಇದ್ದೇ ಇದೆ. ಬಹುತೇಕ ಪ್ರಕರಣಗಳಲ್ಲಿ ಅವರು ಮುಸ್ಲಿಮರೇ ಆಗಿದ್ದಾರೆ ಎಂದು ಹೇಳುವ ಮೂಲಕ ಕಿಚ್ಚು ಹಚ್ಚಿದ್ದರು.
ಈ ಟ್ವೀಟ್ ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಅಷ್ಟೆ ಏಕೆ ಅನೇಕರು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ವಿರೋಧ ನಡುವೆಯೂ ತೇಜಸ್ವಿ ಸೂರ್ಯ ಟ್ವೀಟ್ ಡಿಲೀಟ್ ಮಾಡಿರಲಿಲ್ಲ.
ಇದೀಗ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಇಲಾಖೆ ಟ್ವಿಟ್ಟರ್ ಬಳಿ ಮನವಿ ಮಾಡಿದೆಯಂತೆ. ತೇಜಸ್ವಿ ಟ್ವೀಟ್ ಸೇರಿದಂತೆ ಕೋಮುವಾದಕ್ಕೆ ಸಂಬಂಧಪಟ್ಟಂತೆ ಒಟ್ಟು 121 ಪೋಸ್ಟ್ಗಳನ್ನು ಅಳಿಸಿ ಹಾಕಲು ಟ್ವಿಟ್ಟರ್ ಬಳಿ ಕೇಂದ್ರ ಮನವಿ ಮಾಡಿದೆ ಎನ್ನಲಾಗುತ್ತಿದೆ.