ಇಡೀ ಜಗತ್ತಿನಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಅಂದರೆ ವೈದ್ಯರು, ಪೊಲೀಸರು. ಒಂದು ಗಳಿಗೆಯೂ ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಆಂಧ್ರದ ವೈದ್ಯರೊಬ್ಬರು ಇಂತಹ ಸಮಯದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಹೌದು, ವಿಶಾಖಪಟ್ಟಣಂನ ನರಸೀಪಟ್ಟಣಂ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಸುಧಾಕರ್ ಎಂಬ ವೈದ್ಯ ಕುಡಿದು ರಸ್ತೆಯಲ್ಲಿ ಉರುಳಾಡುತ್ತಾ ಸರ್ಕಾರಕ್ಕೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ ಎನ್ನಲಾಗಿದೆ.
ವೈದ್ಯನ ಈ ಕೆಲಸಕ್ಕೆ ಆಂಧ್ರ ಪ್ರದೇಶ ಸರ್ಕಾರವೇ ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರದ ವಿರುದ್ಧ ಈ ವೈದ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಂತೆ. ಹೀಗಾಗಿ ವೈದ್ಯನನ್ನು ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಠಪೂರ್ತಿ ಕುಡಿದು ಸರ್ಕಾರಕ್ಕೆ ಬೈದಿದ್ದಾರೆ.
ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ನನ್ನನ್ನು ಕಿಡ್ನಾಪ್ ಮಾಡಿ, ಈಗ ರಸ್ತೆಗೆ ಬಿಸಾಡಿ ಹೋಗಿದ್ದಾರೆ ಎಂದು ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಆಂಧ್ರ ಸಿಎಂ ನನ್ನನ್ನು ಕೊಲ್ಲಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇವರ ಬೆನ್ನಿಗೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಂತಿದ್ದು, ವೈದ್ಯರನ್ನು ಈ ರೀತಿ ನಡೆಸಿಕೊಂಡಿದ್ದಕ್ಕೆ ಕಿಡಿ ಕಾರಿದ್ದಾರೆ.