ಲಾಕ್ ಡೌನ್ ನಡುವೆಯೂ ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದು, ಇಂದಿನಿಂದ ಆಯ್ದ 15 ಮಾರ್ಗಗಳಲ್ಲಿ 30 ವಿಶೇಷ ರೈಲುಗಳು ಸಂಚರಿಸಲಿವೆ. ಸದ್ಯ ರೈಲ್ವೆ ಇಲಾಖೆ ಎಂಟು ದಿನದ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪ್ರಯಾಣಿಕರ ಸುರಕ್ಷತೆ ಕುರಿತಂತೆ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ರೈಲ್ವೆ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದ್ದು, ಪ್ರಯಾಣಿಕರು ಆಹಾರ, ಹೊದಿಕೆ, ದಿಂಬಿನಂತ ಅಗತ್ಯ ಸಾಮಾಗ್ರಿಗಳನ್ನು ಸ್ವತಃ ತಾವೇ ತರಬೇಕಾಗಿದೆ. ಅಲ್ಲದೆ ತಪಾಸಣೆಗೆ ಒಳಗಾಗಬೇಕಾಗಿರುವ ಕಾರಣ 90 ನಿಮಿಷ ಮೊದಲು ರೈಲ್ವೆ ನಿಲ್ದಾಣಕ್ಕೆ ಆಗಮಿಸುವಂತೆ ಸೂಚಿಸಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಕೊರೊನಾ ಸೋಂಕು ಲಕ್ಷಣವಿರದ ಪ್ರಯಾಣಿಕರಿಗಷ್ಟೇ ರೈಲು ಏರಲು ಅವಕಾಶ ಕಲ್ಪಿಸಲಾಗುತ್ತಿದ್ದು, ಟಿಕೆಟ್ ಹೊಂದಿರುವವರಿಗೆ ಮಾತ್ರವೇ ನಿಲ್ದಾಣಕ್ಕೆ ಪ್ರವೇಶ ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ನವದೆಹಲಿ – ಬೆಂಗಳೂರು, ಬೆಂಗಳೂರು – ನವದೆಹಲಿ ನಡುವೆ ನಿತ್ಯವೂ ರೈಲು ಸಂಚರಿಸಲಿದ್ದು, ರಾತ್ರಿ 8-30 ಕ್ಕೆ ಬೆಂಗಳೂರಿನಿಂದ ಹಾಗೂ ರಾತ್ರಿ 9-15 ಕ್ಕೆ ನವದೆಹಲಿಯಿಂದ ರೈಲು ಸಂಚರಿಸಲಿದೆ.