ಪಶ್ಚಿಮ ಬಂಗಾಳದಲ್ಲಿ ಆರ್ಭಟ ನಡೆಸುತ್ತಿರುವ ಅಂಫಾನ್ ಚಂಡಮಾರುತಕ್ಕೆ ಈವರೆಗೆ 72 ಮಂದಿ ಬಲಿಯಾಗಿದ್ದಾರೆ. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉತ್ತರ ಹಾಗು ದಕ್ಷಿಣ 24 ಪರಗಣ ಜಿಲ್ಲೆಗಳು ಸಂಪೂರ್ಣವಾಗಿ ನಾಶವಾಗಿವೆ.
ರಾಜಧಾನಿ ಕೋಲ್ಕತ್ತಾದಲ್ಲೂ ಅಂಫಾನ್ ಚಂಡಮಾರುತ ಅಬ್ಬರ ನಡೆಸಿದ್ದು, ನೂರಾರು ಕಾರುಗಳು ಹಾಳಾಗಿವೆ. ಗಾಳಿಯ ರಭಸಕ್ಕೆ ಬೃಹತ್ ಮರಗಳು ಬುಡಮೇಲಾಗಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹೀಗಾಗಿ ಬಹುತೇಕ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ಅಂಫಾನ್ ಚಂಡಮಾರುತದ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದರ ಪ್ರಭಾವ ಕೊರೊನಾ ವೈರಸ್ ಗಿಂತ ಅಧಿಕ ಎಂದು ಹೇಳಿದ್ದಾರೆ. ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಇದನ್ನು ನಿಭಾಯಿಸಲು ಸರ್ಕಾರ ಹೆಣಗಾಡುತ್ತಿದೆ ಎಂದು ದೀದಿ ತಿಳಿಸಿದ್ದಾರೆ.