alex Certify ಕುಶಲಕರ್ಮಿಗಳಿಗೆ ಮುಖ್ಯ ಮಾಹಿತಿ : ವಿಶ್ವಕರ್ಮ ಯೋಜನೆಯಡಿ ಸೌಲಭ್ಯ ಪಡೆಯಲು ನೋಂದಣಿಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಶಲಕರ್ಮಿಗಳಿಗೆ ಮುಖ್ಯ ಮಾಹಿತಿ : ವಿಶ್ವಕರ್ಮ ಯೋಜನೆಯಡಿ ಸೌಲಭ್ಯ ಪಡೆಯಲು ನೋಂದಣಿಗೆ ಸೂಚನೆ

ಶಿವಮೊಗ್ಗ : ಉಪಕರಣಗಳು ಮತ್ತು ಸಲಕರಣೆಗಳಿಂದ ಏನನ್ನಾದರೂ ಸೃಜಿಸುವ ಸಾಂಪ್ರದಾಯಿಕ ಕುಲಕಸುಬುದಾರರು ಸೇರಿದಂತೆ ಬಹುಸಂಖ್ಯಾತರ ಸರ್ವಾಂಗೀಣ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ನಿರುದ್ಯೋಗಿ ಯುವಕರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಿ.ಎಂ.ವಿಶ್ವಕರ್ಮ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯುವ ಸಮುದಾಯವು ಈ ಯೋಜನೆಯಡಿ ತರಬೇತಿ, ತಂತ್ರಜ್ಞಾನ, ಸಾಲ ಮತ್ತು ಮಾರುಕಟ್ಟೆ ಬೆಂಬಲ ಮತ್ತಿತರ ಸಹಕಾರವನ್ನು ಪಡೆದುಕೊಂಡು ತಮ್ಮ ಭವಿಷ್ಯದ ಜೀವನ ನೆಮ್ಮದಿಯಾಗಿರುವಂತೆ ರೂಪಿಸಿಕೊಳ್ಳಬಹುದಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿರುವುದಿಲ್ಲ. ಆದ್ದರಿಂದ ಅರ್ಹರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸೌಲಭ್ಯದ ಲಾಭ ಪಡೆದುಕೊಳ್ಳಬೇಕು. ನಗರ ಮತ್ತು ಪಟ್ಟಣ ಪ್ರದೇಶ ಮಾತ್ರವಲ್ಲದೇ ಗ್ರಾ.ಪಂ. ಮಟ್ಟದಲ್ಲಿಯೂ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಈ ಸಂಬಂಧ ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡಿ, ಗುರಿ ನಿಗಧಿಪಡಿಸಲಾಗಿದೆ. ಈ ಯೋಜನೆಯಡಿ ವಿಶ್ವಕರ್ಮ ಸಮುದಾಯದವರಲ್ಲದೇ ಇತರೆ ಎಲ್ಲಾ ಸಮುದಾಯವರು ಯೋಜನೆಯಡಿ ಹೆಸರು ನೋಂದಾಯಿಸಕೊಳ್ಳಬಹುದಾಗಿದೆ ಎಂದರು.

ವಿವಿಧ ವೃತ್ತಿಗಳಲ್ಲಿ ತೊಡಗಿರುವ ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ವಿವಿಧ ಸೌಲಭ್ಯಗಳನ್ನು ಪಡೆಯಲು ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಜಿಲ್ಲಾ ಸಮಿತಿಯಿಂದ ಪಿ.ಎಂ.ವಿಶ್ವಕರ್ಮ ಪ್ರಮಾಣಪತ್ರ, ಗುರುತಿನ ಚೀಟಿ, ಕೌಶಲ್ಯಾಭಿವೃದ್ಧಿ ಉಪಕರಣಗಳಿಗೆ ಪ್ರೋತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ದೊರೆಯಲಿದೆ. ಅಲ್ಲದೇ 5-7ದಿನಗಳ ತರಬೇತಿ ನೀಡಲಾಗುವುದು. ತರಬೇತಿಯ ನಂತರ ರೂ.15,000 ಮೌಲ್ಯದ ಉಪಕರಣಗಳನ್ನು ಒದಗಿಸಲಾಗುವುದು ಎಂದರು.

ಇದಲ್ಲದೇ ತರಬೇತಿ ಪಡೆದ ಕುಶಲಕಮಿಗಳಿಗೆ ಶೇ.5ರ ಬಡ್ಡಿದರದಲ್ಲಿ 1ಲಕ್ಷ ರೂ. ಸಾಲ ಸೌಲಭ್ಯ, ನಂತರ 15ದಿನಗಳ ಉನ್ನತ ಮಟ್ಟದ ತರಬೇತಿ ನೀಡಿ, ಮೊದಲು ಪಡೆದ ಒಂದು ಲಕ್ಷ ರೂ. ಸಾಲ ಮರುಪಾವತಿಯಾದ ನಂತರ ರೂ.2.00ಲಕ್ಷ ಗಳ ಸಾಲ ನೀಡಲಾಗುವುದಲ್ಲದೇ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಲಾಗುವುದು ಎಂದರು.

ಈ ಯೋಜನೆಯಡಿ ಬಡಗಿಗಳು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕುಶಲಕರ್ಮಿಗಳು, ಮೇಸ್ತ್ರಿಗಳು, ದರ್ಜಿಗಳು, ದೋಣಿ ತಯಾರಿಸುವವರು, ದುರಸ್ತಿ ಮತ್ತು ಸೇವೆ ಒದಗಿಸುವ ಅಸಂಘಟಿತ ವಲಯದ ಕುಶಲಕರ್ಮಿಗಳು, ಕಮ್ಮಾರ, ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಿಕೆ, ಬೀಗ ತಯಾರಕರು, ಆಭರಣ ತಯಾರಿಕೆ, ಚರ್ಮಗಾರಿಕೆ, ಹೂ ಮಾಲೆ ತಯಾರಕರು, ದೋಬಿ, ಮೀನಿನ ಬಲೆ ತಯಾರಿಸುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ಹೆಸರು ನೋಂದಾಯಿಸಿಕೊಳ್ಳುವ ಫಲಾನುಭವಿಯು ಸ್ವಯಂ ಉದ್ಯೋಗಿಯಾಗಿದ್ದು, 18ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬದಲ್ಲಿ ಓರ್ವರು ಮಾತ್ರ ನೋಂದಾಯಿಸಿಕೊಳ್ಳಬಹುದು. ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು. ಕಳೆದ 5ವರ್ಷಗಳ ಅವಧಿಯಲ್ಲಿ ಪಿ.ಎಂ. ಇ.ಜಿ.ಪಿ., ಮುದ್ರಾ ಮತ್ತು ಪಿ.ಎಂ. ಸ್ವನಿಧಿ ಸಾಲಗಳನ್ನು ಪಡೆದಿರಬಾರದು. ಮುದ್ರಾ ಮತ್ತು ಪಿ.ಎಂ.ಸ್ವ-ನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಉಪನಿರ್ದೇಶಕ ವೀರೇಶ್ನಾಯ್ಕ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ನಗರ ಯೋಜನಾ ನಿರ್ದೇಶಕ ಮನೋಹರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...